ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಅಭಿಯಾನದ ಮೂಲಕ ವಿಶಿಷ್ಟ ರೀತಿಯ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ: ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಹಿರಿಯ ನಾಗರಿಕರೊಂದಿಗೆ ಸಾರ್ವಜನಿಕ ಕಚೇರಿಗಳ ಶೌಚಾಲಯಗಳನ್ನು ಸ್ವಚ್ಛ ಮಾಡುವ ಮೂಲಕ  ಸ್ವಾತಂತ್ರೋತ್ಸವವನ್ನು ವಿಶಿಷ್ಟ ರೀತಿಯಲ್ಲಿ  ಆಚರಿಸಲಾಯಿತು.

ಉಡುಪಿ ನಗರ ವ್ಯಾಪ್ತಿಯ ಒಳಗಡೆ ಇರುವ ಸರಕಾರಿ ಶೌಚಾಲಯಗಳು, ಸರಕಾರಿ ಪರಿಸರಗಳು ನಾಚಿಗೆ ತರುವ ರೀತಿಯಲ್ಲಿ ಇರುವುದನ್ನು ಗಮನಿಸಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯ ಶೌಚಾಲಯವನ್ನು ಸ್ವಚ್ಛ ಪಡಿಸುವ ಕಾರ್ಯವನ್ನು ಹಿರಿಯ ನಾಗರಿಕರೊಂದಿಗೆ ಸೇರಿಕೊಂಡು ನಡೆಸಲಾಯಿತು.

ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ನಗರಸಭಾ ಸದಸ್ಯರ ಕಾರ್ಯವನ್ನು ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ಶ್ಲಾಘಿಸಿದರು.

ಪ್ರತೀ ಬಾರಿಯೂ ನಾವು ಶೌಚಾಲಯದ ಒಳಗೆ ಹೋಗುವಾಗ ದುರ್ನಾಥ ಬರುತ್ತದೆ, ಅದನ್ನು ಯಾರೂ ಕೇಳುವವರಿಲ್ಲ. ಅಧಿಕಾರಿಯನ್ನು ಕರೆದು ಅವರನ್ನು ತರಾಟೆಗೆ ತೆಗೆದುಕೊಂಡು ಶೌಚಾಲಯದ ಸ್ವಚ್ಚತಾ ಕಾರ್ಯ ಮಾಡಿರುವುದು ತುಂಬಾ ಒಳ್ಳೆಯ ಕೆಲಸ,  ತಂಡವು ಪ್ರತೀ ತಿಂಗಳು ಇಂತಹ ಕಾರ್ಯ ಮಾಡಿದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಶೌಚಾಲಯಗಳು ಸ್ವಚ್ಚವಾಗುವುದು ಎಂದು ವ್ಯಾಪಾರಿಗಳು ಹೇಳಿದರು.

ಈಗಾಗಲೇ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರದ ವತಿಯಿಂದ ಒಬ್ಬ ಕಾಂಟ್ರಾಕ್ಟರ್ ಅನ್ನು ನೇಮಕ ಮಾಡಿ ತಿಂಗಳಿಗೆ 1,50,000.00 ( ಒಂದು ವರೆ ಲಕ್ಷ) ರೂಪಾಯಿಯನ್ನು ಸರಕಾರದ ವತಿಯಿಂದ ನೀಡಿದರೂ  ಸರಿಯಾಗಿ ವ್ಯವಸ್ಥೆ ಆಗದಿರುವುದನ್ನು ಗಮನಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಲಾಯಿತು.

ಉಡುಪಿ ನಗರ ವ್ಯಾಪ್ತಿಯಲ್ಲಿ ಇಂತಹ ದುಸ್ಥಿತಿ ಕಂಡುಬಂದಲ್ಲಿ ಪ್ರತೀ ತಿಂಗಳ ಮೊದಲ ಭಾನುವಾರ ಸ್ವಚ್ಚತಾ ಕಾರ್ಯ ಮಾಡುತ್ತೇವೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಅಮೀನ್ ಮೂಡುಬೆಟ್ಟು, ಕೆ ಸುಂದರ್ ಪಾಲನ್, ಅಶೋಕ್ ಶೆಟ್ಟಿಗಾರ್, ಅಜಿತ್ ಕುಮಾರ್ ಕೊಡವೂರು, ವಿನಯ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.