ಉಡುಪಿ ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮವು ಮಂಗಳ ವಾರದಂದು ಸಂತೆಕಟ್ಟೆಯ ಲಕ್ಷ್ಮೀನಗರದ ಗ್ರೀನ್‌ ಏಕರ್ಸ್ ನಲ್ಲಿ ಜರಗಿತು.

ಕೇಮಾರು ಸಾಂದೀಪನೀ ಸಾಧನಾ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯೋಸಿಸ್‌ನ ವಿಕಾರ್‌ ಜನರಲ್‌ ವಂ. ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಈಶ ವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು ಎಂದರು. ಮಾಲಕರು, ನೌಕರರ ಮಕ್ಕಳು ಶಿಕ್ಷಣ, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.

ವಂ. ಫರ್ಡಿನಾಂಡ್‌ ಗೊನ್‌ಸಾಲ್ವಿಸ್‌ ಮಾತನಾಡಿ, ಜನರ ಹಸಿವು ನೀಗಿಸುವ, ಊಟ ಕೊಡುವ ಪುಣ್ಯದ ಕಾರ್ಯವನ್ನು ಕ್ಯಾಟರಿಂಗ್‌ ಸಂಸ್ಥೆಗಳು ನಿರ್ವಹಿಸುತ್ತಿವೆ. ಎಲ್ಲರೂ ಸಂಘಟಿತರಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಉತ್ತಮ ಊಟೋಪಚಾರದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹಾರೈಸಿದರು.

ವಿವಿಧ ಕ್ಯಾಟರಿಂಗ್‌ ಸಂಸ್ಥೆಯ ಮಾಲಕರಾದ ಭರತ್‌ ಶೆಟ್ಟಿ, ಇಗ್ನೇಷಿಯಸ್‌ ಡಿ’ಸೋಜಾ, ರೊನಾಲ್ಡ್ ರಾಡ್ರಿಗಸ್‌, ರವೀಂದ್ರ ಶೆಟ್ಟಿ ಶಿರ್ವ, ಅನಿಲ್‌ ಡಿಮೆಲ್ಲೊ, ಅನಿಲ್‌ ಡೆಸಾ, ದಯಾನಂದ್‌, ರಮೇಶ್‌, ಭಾಸ್ಕರ್‌, ಸುಶಾಂತ್‌, ಪ್ರಸಾದ್‌ ಅಂಚನ್‌ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಜೂಲಿಯಸ್‌ ಲಿವೀಸ್‌ ದಾನಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಗಣೇಶ್‌ ಸಾಲ್ಯಾನ್‌ ವಂದಿಸಿದರು. ಗೌರವ ಸಲಹೆಗಾರ ಡೇನಿಷ್‌ ರಾಡ್ರಿಗಸ್‌ ಪ್ರಸ್ತಾವನೆಗೈದು, ಕೋಶಾಧಿಕಾರಿ ದೀಕ್ಷಿತ್‌ ಶೆಟ್ಟಿ ಸ್ವಾಗತಿಸಿ, ಆಲ್ವಿನ್‌ ಅಂದ್ರಾದೆ ನಿರೂಪಿಸಿದರು.