ಉಡುಪಿ: ಯಕ್ಷಾಭಿನಯ ಬಳಗ ಮಂಗಳೂರು ಇದರ ಮೂರನೇ ವರ್ಷದ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರವು ಮಂಗಳೂರು ನಗರದ ಕಾಪಿಕಾಡಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಯಕ್ಷಗಾನ ಸಂಘಟಕ ಡಾ. ಮಂಟಪ ಮನೋಹರ ಉಪಾದ್ಯಾಯರು ದೀಪ ಪ್ರಜ್ವಲಿಸಿ ತರಗತಿಯನ್ನು ಉದ್ಘಾಟಿಸಿದರು.
ಯಕ್ಷಗಾನ ಗುರುಗಳಾದ ಯಕ್ಷಶ್ರೀ ಐರೋಡಿ ಮಂಜುನಾಥ್ ಕುಲಾಲ್, ಸಂಘದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ದೇವು ಹನೆಹಳ್ಳಿ ಸತ್ಯನಾರಾಯಣ ರಾವ್ ಮತ್ತು ಶ್ರೀಮತಿ ಭಾಗ್ಯಪ್ರಕಾಶ್ ಉಡುಪ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಖಜಾಂಚಿ ರಾಘವೇಂದ್ರ ನೆಲ್ಲಿಕಟ್ಟೆ, ತಂಡದ ಇತರ ಪದಾಧಿಕಾರಿಗಳು ಹಾಗೂ ಗಣ್ಯ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಸೌಮ್ಯ ಎ.ಕೆ. ಅವರು ಸ್ವಾಗತಿಸಿದರು. ಕು. ಸ್ವಸ್ಥಿಶ್ರೀ ಮತ್ತು ಮಾ. ಆರುಷ್ ಪ್ರಾರ್ಥನೆಯನ್ನು ಹಾಡಿದರು. ಕು. ಪ್ರಥ್ವಿ ರಾವ್ ವಂದನಾರ್ಪಣೆ ಸಲ್ಲಿಸಿದರು. ಶ್ರೀ ರಾಮಕೃಷ್ಣ ಮರಾಠಿಯವರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ಗುರುಗಳಾದ ಐರೋಡಿ ಮಂಜುನಾಥ್ ಕುಲಾಲ್ ನಿರ್ದೇಶನದಲ್ಲಿ ತರಬೇತಿಯು ಶುಭಾರಂಭಗೊಂಡಿತು. ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿಯ ಏಕೈಕ ಸಂಸ್ಥೆ ಯಕ್ಷಾಭಿನಯ ಬಳಗ ಎಂಬುದು ಗಮನಾರ್ಹ. ಯಕ್ಷಗಾನಾಸಕ್ತರು ತರಗತಿಯ ಸದುಪಯೋಗ ಪಡೆಯಬಹುದು.


















