ಅಧಿಕಾರಕ್ಕೆ ಬಂದರೆ 94 ಸಿ ಅರ್ಜಿಗಳಿಗೆ ಮರುಜೀವ: ವಿನಯ್ ಕುಮಾರ್ ಸೊರಕೆ

ಉಡುಪಿ: ಶಾಸಕನಾಗಿದ್ದ ಕಾಲದಲ್ಲಿ ಶಿಫಾರಸು ಮಾಡಿದ್ದ 94 ಸಿ ಅರ್ಜಿಗಳು ಗೆದ್ದಲು ಹಿಡಿದಿದ್ದು ಅವುಗಳಿಗೆ ಮರು‌ಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ ಕೆಲಸವನ್ನು ಮಾಡಲಾಗುವುದು. 94 ಸಿ ಕಾನೂನು ಮತ್ತು ಅಕ್ರಮ‌ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಗಳನ್ನು ಶಿಫಾರಸು ಮಾಡಿದ್ದರೂ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಕಾಪು ವಿಧನಾಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು.

ಮೇ.1 ರಂದು ಪೆರ್ಡೂರು ಪೇಟೆಯಲ್ಲಿ‌ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಪೆರ್ಡೂರು ದೇವಸ್ಥಾನಕ್ಕೆ ಹಾನಿ ಆಗದಂತೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯಬೇಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಈಗ ನಡೆಸುತ್ತಿರುವ ಕಾಮಗಾರಿಯಲ್ಲಿ ಪಾಣಿಗ್ರಹದಲ್ಲಿ ಕಂಪನ ಉಂಟಾಗುವುದೆಂದು ದೇವಳದ ಅರ್ಚಕರು ತಿಳಿಸಿದ್ದಾರೆ.‌ ಕೆರೆ, ರಥಬೀದಿ ನಾಶವಾಗಿ ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ. ‌ಬೈಪಾಸ್ ರಸ್ತೆ ಮೂಲಕ ಈ ಕಾಮಗಾರಿ ನಡೆದಲ್ಲಿ, ದೇವಸ್ಥಾನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ, ಇದಕ್ಕೆ ತಮ್ಮ ಬೆಂಬಲವಿರಲಿದೆ ಎಂದರು.

ಕ್ಷೇತ್ರದಾದ್ಯಂತ ಕುಡಿಯುವ ನೀರಿನ‌ ಸಮಸ್ಯೆ ಜನರನ್ನು ಕಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಕುಡಿಯುವ‌ ನೀರಿಗೆ ಆದ್ಯತೆ ಕೊಡದೆ, ಮೂಲಭೂತ ಸೌಕರ್ಯದಿಂದ ಜನರನ್ನು ವಂಚಿತರನ್ನಾಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಕುಡಿಯುವ ನೀರಿನ ಮೂಲ ಹುಡುಕುವ ಬದಲು ಪೈಪ್ ಲೈನ್ ಮಾತ್ರ ಹಾಕುವ ಕೆಲಸವಾಗುತ್ತಿದೆ ಎಂದು ಸೊರಕೆ‌ ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳಿ ಮಾತನಾಡಿ, ಈಗಿನ ಬಿಜೆಪಿ ಅಭ್ಯರ್ಥಿಯ ಮೇಲೆ ಎರಡು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅವರೇ ಸಲ್ಲಿಸಿದ ಅಫಿದವಿತ್ ನಲ್ಲಿ ಹೇಳಿಕೊಂಡಿದ್ದಾರೆ. ಗಣಿ ಲೂಟಿಯಲ್ಲಿ ಸರಕಾರಕ್ಕೆ 81 ಕೋಟಿ ವಂಚಿಸಿದ ಪ್ರಕರಣ ಇದರಲ್ಲಿ ಮುಖ್ಯವಾದದ್ದು. ಈ ಬಗ್ಗೆ ಜನರು ಯೋಚಿಸಬೇಕಾಗಿದೆ.‌ ಆಲೋಚಿಸಿ ಮತ ಹಾಕಬೇಕಾಗಿದೆ. ಕಮಲ‌ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ಪ್ರಾಮಾಣಿಕವಾದ ಕೈ ಅಧಿಕಾರದಲ್ಲಿದ್ದರೆ ಚಂದ. ಹಾಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯವರೇ ಉತ್ತಮ ಆಯ್ಕೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಾಂತಾರಾಮ‌ ಸೂಡ, ಚರಣ್ ವಿಠಲ್ ಕುದಿ, ಜಿತೇಂದ್ರ ಫುಟಾರ್ಡೊ, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.