ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯಬೇಕು: ಡಾ| ಪೂರ್ಣಿಮ ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿ ಬಿಡುಗಡೆ

ಕಾರ್ಕಳ, ಜ. 22 : ಮುಂಬೈ ವಿವಿಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿಯನ್ನು ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿ ರಚನೆಗಾರ್ತಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜು ಶಿಕ್ಷಣ ಮುಗಿದಾಗ ಮುಂದೇನು ಅನ್ನುವ ಪ್ರಶ್ನೆ ನನ್ನ ಮುಂದೆ ಇತ್ತು. ಆ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆದರೆ ಕೂಡು ಕುಟುಂಬದಲ್ಲಿ ಬೆಳೆದರೂ ಮನೆಯವರ ಪ್ರೋತ್ಸಾಹದಿಂದ ಶಿಕ್ಷಣ ಪಡೆದು ಇಷ್ಟೆಲ್ಲ ಸಾಧನೆ ಮಾಡುವಂತಾಗಿದೆ. ಓದು ನನ್ನ ಹವ್ಯಾಸ, ಪುಸ್ತಕದೊಂದಿಗೆ ನನ್ನ ಸಮಯವನ್ನು ಕಳೆಯುತ್ತಿದ್ದೆ. ಪುಸ್ತಕ ನನ್ನನ್ನು ಈ ಮಟ್ಟಕ್ಕೆ ಏರಿಸಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯಬೇಕು ಎಂದರು.
ಸಾಹಿತಿ ಶಾಂತಾರಾಮ ಶೆಟ್ಟಿ ಬೆಂಗಳೂರು ಅವರು ಕೃತಿ ಬಿಡುಗಡೆಗೊಳಿಸಿ, ಶುಭಹಾರೈಸಿದರು. ಚೈತನ್ಯ ಕಲಾವಿದರು ತಂಡದ ರಾಘವೇಂದ್ರ ಅಮೀನ್, ರಾಕೇಶ್ ಪೂಜಾರಿ ಹೂಡೆ, ನಾಟಕ ಪ್ರಯೋಜಕ ಗುಣಕರ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವನಾಥ ಭಟ್ ಅಧ್ಯಕ್ಷತೆ ವಹಿದ್ದರು. ರಂಗನಟ ವಿಶ್ವನಾಥ ಶೆಟ್ಟಿ, ಮುಂಬೈ ಕನ್ನಡ ಕಲಾ ಕೇಂದ್ರ ಅಧ್ಯಕ್ಷ ಬಾಲಚಂದ್ರರಾವ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮುಲ್ಲಡ್ಕ, ಬೈಲೂರು ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಉದ್ಯಮಿ ಬೈಲೂರು ಚಂದ್ರಶೇಖರ ಮಾಡಾ, ಸುದೇಶ್ ರೈ, ಹರೀಶ್ಚಂದ್ರ ಶೆಟ್ಟಿ ಕೌಡೂರು, ನಾಟಕ ಪ್ರಾಯೋಜಕ ಗುಣಕರ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಗವಹಿಸಿದ್ದರು. ಪ್ರಸನ್ನ ಶೆಟ್ಟಿ ಕೌಡೂರು ಸ್ವಾಗತಿಸಿ, ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕದಿಂದ ಮುಂಬೈಗೆ ವಲಸೆ ಹೋಗಿರುವ ಕನ್ನಡಿಗರು ಕಳೆದ 150 ವರ್ಷದ ಅವಧಿಯಲ್ಲಿ ನಡೆಸಿದ ಸಾಧನೆ, ಹೋಟೆಲ್, ಬಾಲಿವುಡ್, ವೈದ್ಯಕೀಯ ಕ್ಷೇತ್ರದಲ್ಲಿ ನಡೆಸಿರುವಂತ ವಿವಿಧ ಹಂತಗಳ ಸಾಧನೆಯ ಬಗ್ಗೆ ವಿಶ್ಲೇಷನಾತ್ಮಕವಾಗಿ ಪುಸ್ತಕದಲ್ಲಿ ತಿಳಿಸಲಾಗಿದೆ.