ರವಿಕಟಪಾಡಿ ಸ್ನೇಹಿತರ ಬಳಗದಿಂದ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ 16 ಲಕ್ಷ ಧನಸಹಾಯ

ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ಮಾಡುವ ಉದ್ದೇಶದಿಂದ ಶ್ರೀಕೃಷ್ಣಾಜನ್ಮಾಷ್ಟಮಿಯ ವೇಷಧಾರಿ ರವಿ ಕಟಪಾಡಿ ಹಾಗೂ ಅವರ ಸ್ನೇಹಿತರು ಸ್ಥಾಪಿಸಿದ ಮಿಲಾಪ್ ಅಭಿಯಾನಕ್ಕೆ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಒಟ್ಟು 16 ಲಕ್ಷ ರೂಪಾಯಿಗಳು ದೇಣಿಗೆಯ ರೂಪದಲ್ಲಿ ಸಂಗ್ರಹವಾಗಿದೆ ಎಂದು ಸಮಾಜ ಸೇವಕ ಮಹೇಶ್ ಶೆಣೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮೊತ್ತವನ್ನು ರವಿ ಕಟಪಾಡಿ ಸ್ನೇಹಿತರು ಡಿ. 24ರಂದು ಸಂಜೆ 4.30ಕ್ಕೆ ಕಟಪಾಡಿ ವಿಜಯ ಬ್ಯಾಂಕ್ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ನಾಗರಿಕರ ಸಮ್ಮುಖದಲ್ಲಿ 5 ಮಂದಿ ಅನಾರೋಗ್ಯ ಪೀಡಿತ ಮಕ್ಕಳಿಗೆ ವಿತರಣೆ ಮಾಡುವರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕೇಮಾರು ಸಾಂದೀಪನಿ ಆಶ್ರಮದ ಈಶವಿಠಲದಾಸ ಸ್ವಾಮೀಜಿ ಮುಖ್ಯಾತಿಥಿಗಳಾಗಿ ಆಗಮಿಸುವರು ಎಂದರು.
ರವಿ ಕಟಪಾಡಿ ಸ್ನೇಹಿತರು ಕಳೆದ ಐದು ವರ್ಷಗಳಲ್ಲಿ 27 ಮಕ್ಕಳ ಚಿಕಿತ್ಸೆಗಾಗಿ ಒಟ್ಟು 32,28,810 ರೂ.ಗಳಷ್ಟು ಧನಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರವಿಕಟಪಾಡಿ, ಚರಣ್, ಸುಧೀಶ್ ಇದ್ದರು.