ಮಹಾಮಳೆಗೆ ನಲುಗಿದ ಆಂಧ್ರ, ತೆಲಂಗಾಣ: 47 ಮಂದಿ ಸಾವು

ಹೈದರಾಬಾದ್‌: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವರ್ಷಾಧರೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್‌ ಹಾಗೂ ಆಂಧ್ರ ಪ್ರದೇಶದ ವಿವಿಧ ಭಾಗಗಳು ಮುಳುಗಡೆಯಾಗಿವೆ. ಬುಧವಾರ ಸುರಿದ ಭಾರಿ ಮಳೆಗೆ 47 ಜನರು ಮೃತಪಟ್ಟಿದ್ದಾರೆ.

ತೆಲಂಗಾಣದಲ್ಲಿ ರಾಜ್ಯದಲ್ಲಿ 32 ಜನರು ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ರಾಜಧಾನಿ ಹೈದಾರಬಾದ್‌ನಲ್ಲೇ 15 ಜನರು ಸಾವನ್ನಪ್ಪಿದ್ದಾರೆ. ಆಂಧ್ರದ ವಿವಿಧ ಭಾಗಗಳಲ್ಲಿ 15 ಜನರು ಮೃತಪಟ್ಟಿದ್ದಾರೆ.

ಹೈದರಾಬಾದ್ ನಲ್ಲಿ ಮಳೆಯ ಅವಾಂತರ:
ಮಹಾಳೆಯಿಂದ ಹೈದರಾಬಾದ್‌ನ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು ನೂರಾರು ಮನೆಗಳು ಕುಸಿದು ಬಿದ್ದಿವೆ. ನೀರಿನಲ್ಲಿ ವ್ಯಕ್ತಿ ಸೇರಿದಂತೆ, ಕಾರು, ಆಟೊಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಈಗಾಗಲೇ ರಾಜಧಾನಿಯಲ್ಲಿ ಗುರುವಾರದ ವರೆಗೆ ರಜೆ ಘೋಷಣೆ ಮಾಡಲಾಗಿದ್ದು ಮುಂದಿನ ಎರಡು ದಿನ ಇನ್ನಷ್ಟು ಮಳೆ ಸುರಿಯುವ ಮುನ್ಸೂಚನೆ ಇದೆ. ಜನರು ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ.

ಆಂಧ್ರದಲ್ಲೂ ಭಾರೀ ಮಳೆ:
ಬುಧವಾರ ಆಂಧ್ರಪ್ರದೇಶದಲ್ಲೂ ನೂರಕ್ಕೂ ಹೆಚ್ಚು ಭಾಗಗಳಲ್ಲಿ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ,  ವಿಶಾಖಪಟ್ಟಣಂ ಮತ್ತು ಕೃಷ್ಣ ಈ ಜಿಲ್ಲೆಗಳು ಮಹಾ ಮಳೆಗೆ ನಲುಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ