ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಷಯಗಳ ನಿಯಂತ್ರಣಕ್ಕೆ ಶೀಘ್ರ ಜಾಲತಾಣಗಳ ಮುಖ್ಯಸ್ಥರ ಸಭೆ: ಗೃಹ ಸಚಿವ ಬೊಮ್ಮಾಯಿ

ಹಾವೇರಿ: ಕೋಮು ಸಾಮರಸ್ಯ ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯ ಕದಡುವ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ವಿಷಯಗಳ ಪೂರ್ವ ಪರಿಶೀಲನೆ ಕುರಿತಂತೆ ಚರ್ಚಿಸಲು ಎಲ್ಲ ಜಾಲತಾಣಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಇನ್ಸಟ್ರಾಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಪೋಸ್ಟ್ ಮಾಡುವ ಮುನ್ನ ಆಯಾ ಕಂಪನಿಗಳು ಪರಿಶೀಲಿಸಿ ಈ ಹಂತದಲ್ಲೇ ಕಡಿವಾಣ ಹಾಕುವ ಕುರಿತಂತೆ ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿರ್ಧರಿಲಾಗುವುದು. ಈ ಕುರಿತಂತೆ ಶೀಘ್ರವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದ ಎಂದು ತಿಳಿಸಿದರು.
ನೆರೆಯಂತಹ ವಿಪತ್ತು ನಿರ್ವಹಣೆಗೆ ರಾಜ್ಯದ ಬೇಡಿಕೆಯಂತೆ ನಾಲ್ಕು ಎನ್.ಡಿ.ಆರ್.ಎಫ್. ತಂಡಗಳ ಜೊತೆಗೆ ಹೆಚ್ಚುವರು ನಾಲ್ಕು ತಂಡ ಒಳಗೊಂಡಂತೆ ಎಂಟು  ತಂಡಗಳನ್ನು ಕಳುಹಿಸಲು ಅನುಮತಿ ನೀಡಿದ್ದಾರೆ ಎಂದರು.
ಭೂ ಕುಸಿತ ಸೇರಿದಂತೆ ತೀವ್ರ ತರದ ವಿಪತ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಅಂತರ ರಾಜ್ಯ ವಿಪತ್ತು ನಿರ್ವಹಣೆಯ ಘಟಕಗಳ ಸ್ಥಾಪನೆಗೆ ಕೇಂದ್ರಕ್ಕೆ ಕೋರಲಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಇದರಿಂದ  ನೆರೆ ಇತರ ತುರ್ತು ಸಂದರ್ಭಗಳಲ್ಲಿ ಅಕ್ಕಪಕ್ಕದ ರಾಜ್ಯಗಳ ಸಮನ್ವಯದಿಂದ ವಿಪತ್ತು ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣಕ್ಕಾಗಿ ಆರ್.ಟಿ.ಪಿ.ಆರ್. ಹಾಗೂ ರಾ ್ಯ ಪಿಡ್ ಆಂಟಿಜನ್ ಟೆಸ್ಟ್‍ಗಳನ್ನು ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ. ಹೈ ಫ್ಲೋ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಐ.ಸಿ.ಯು ವಾರ್ಡ್ ಗಳಲ್ಲಿ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕೊರೊನಾ ನಿರ್ಮೂಲನೆಗೆ ರೆಮಿಡಿಡಿಸಿವರ್ ಲಸಿಕೆ ಅತ್ಯುತ್ತಮ ಪರಿಣಾಮವಿದೆ.  ಒಂದು ಇಂಜೆಕ್ಸ್‍ನ್‍ಗೆ ಐದು ಸಾವಿರ ಬೆಲೆ ಇದೆ.  ರೆಮಿಡಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುವ ಮೂಲಕ ಕೋವಿಡ್ ಸೋಂಕಿತ ಬಡವರ ಜೀವ ಉಳಿಸಲು ಕ್ರಮಹಿಸಲಾಗುವುದು ಎಂದು ತಿಳಿಸಿದರು.
ಪಿ.ಎಂ.ಕೇರ್ ಯೋಜನೆಯಡಿ ರಾಜ್ಯಕ್ಕೆ 660 ನಾನ್‍ಇನ್‍ವೇಜಿವ್ ವೆಂಟಿಲೇಟರ್ ಪೂರೈಕೆಯಾಗಲಿದ್ದು, ಈ ಪೈಕಿ ಜಿಲ್ಲೆಗೆ 20 ರಿಂದ 25 ವೆಂಟಿಲೇಟರ್ ಪೂರೈಕೆಗೆ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಉನ್ನತೀಕರಣ ಕಾರ್ಯ ನಡೆದಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹಿನ್ನಲ್ಲೆಯಲ್ಲಿ ಆರೋಗ್ಯದ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ. ಸದಸ್ಯ ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು.