ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಇದೀಗ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. 3 ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ (ಮೇ 7) ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಸಂದೀಪ್‌ ಪಾಟೀಲ್, ಡಾ.ಚೇತನ್ ಸಿಂಗ್ ರಾಥೋರ್, ಅನುಪಮ್ ಅಗರ್ವಾಲ್ ಅವರ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಐಪಿಎಸ್‌ ಅಧಿಕಾರಿಗಳು

ಸಂದೀಪ್‌ ಪಾಟೀಲ್ , ಡಾ.ಚೇತನ್ ಸಿಂಗ್ ರಾಥೋರ್ , ಅನುಪಮ್ ಅಗರ್ವಾಲ್ , ವರ್ಗಾವಣೆಯಾದ ಅಧಿಕಾರಿಗಳು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)ಯ ಐಜಿಪಿ ಆಗಿದ್ದ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ಇದೀಗ ಬೆಳಗಾವಿ ಕೇಂದ್ರ ಕಚೇರಿಯ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರನ್ನು ಡಾ.ಚೇತನ್ ಸಿಂಗ್ ರಾಥೋರ್ ಅವರಿಂದ ತೆರವಾದ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ.

ಬೆಳಗಾವಿಯ ಉತ್ತರ ವಲಯದ ಐಜಿಪಿ ಆಗಿದ್ದ ಡಾ.ಚೇತನ್ ಸಿಂಗ್ ರಾಥೋರ್ ಅವರನ್ನು ಇದೀಗ ಸಿಐಡಿ ವಿಭಾಗದ ಆರ್ಥಿಕ ಅಪರಾಧಗಳ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನೂ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ಇದೀಗ ಸಂದೀಪ್ ಪಾಟೀಲ್ ಅವರ ವರ್ಗಾವಣೆಯಿಂದಾಗಿ ಖಾಲಿಯಾದ ಹಾಗೂ ಮೇಲ್ದರ್ಜೆಗೇರಿಸಲಾದ ಕೆಎಸ್‌ಆರ್‌ಪಿ ಪಡೆಯ ಐಜಿಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.