ಉಡುಪಿ: ಫೆ. 5 ರಂದು ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.
ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆಬ್ರವರಿ 5 ರಂದು ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಿ ನಾಲ್ವರು ವ್ಯಕ್ತಿಗಳು ಶರತ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ಆದರೆ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಆದರೆ ನಮ್ಮ ತಂಡಗಳ ಪರಿಣತಿಯಿಂದ ನಾವು ಈ ಪ್ರಕರಣವನ್ನು ಭೇದಿಸಿದ್ದೇವೆ ಮತ್ತು ನಾಲ್ವರನ್ನು ಬಂಧಿಸಿ, ಅವರಲ್ಲಿ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತಿಬ್ಬರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮುಖ್ಯ ಆರೋಪಿಯು ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆಯುತ್ತಿದೆ ಎಂದರು.
ಮುಖ್ಯ ಆರೋಪಿ ಹಾಗೂ ಮೃತ ವ್ಯಕ್ತಿ ಈ ಹಿಂದೆ ಉತ್ತಮ ಸ್ನೇಹಿತರಾಗಿದ್ದು, ವೈಯಕ್ತಿಕ ಕಾರಣಗಳಿಂದ ಬೇರೆಯಾಗಿದ್ದರು. ಇವರಿಬ್ಬರೂ ಡಿಸೆಂಬರ್ನಲ್ಲಿ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಕೊಲೆ ಮಾಡಲು ಮಂಗಳೂರು ನಗರದಿಂದ ನಾಲ್ವರನ್ನು ನೇಮಿಸಲಾಗಿದ್ದು, ಈ ಪೈಕಿ ನಾಲ್ವರನ್ನು ಸದ್ಯ ಬಂಧಿಸಲಾಗಿದೆ. ಘಟನೆ ನಡೆದ ತಕ್ಷಣ ತನಿಖೆಗಾಗಿ 6 ಸದಸ್ಯರ ತಂಡವನ್ನು ರಚಿಸಲಾಗಿತ್ತು. ಘಟನಾ ಸ್ಥಳದಿಂದ ಮೊಬೈಲ್ ಫೋನ್ಗಳು, ಪಾದರಕ್ಷೆಗಳು, ಶಸ್ತ್ರಾಸ್ತ್ರಗಳು ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಪರಾಧಕ್ಕೆ ಹಣಕಾಸು ಒದಗಿಸಿದ ವ್ಯಕ್ತಿಯನ್ನು ನಾವು ಗುರುತಿಸಿದ್ದೇವೆ ಆದರೆ ಪ್ರಮುಖ ಆರೋಪಿ ಸಿಕ್ಕಿಬಿದ್ದ ನಂತರ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಈ ಕೊಲೆಯ ಯೋಜನೆ ಮತ್ತು ಕಾರ್ಯನ್ವಯಕ್ಕೆ ಕೆಲವು ಇಂಟರ್ನೆಟ್ ಕರೆಗಳನ್ನು ಸಹ ಮಾಡಲಾಗಿದೆ. ಬಂಧಿತರ ವಿವರಗಳನ್ನು ನಾನು ಬಹಿರಂಗಪಡಿಸಲಾರೆ. ಆಂತರಿಕ ಕಲಹದಿಂದ ಈ ಕೃತ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪ್ರಮುಖರನ್ನು ಬಂಧಿಸಬೇಕಾಗಿದೆ ಎಂದರು.
ಬಂಧಿತರನ್ನು ಸುರತ್ಕಲ್ನ ದಿನೇಶ್ (20) ಮತ್ತು ಲಿಖಿತ್ (21) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ವಾರ ಪೊಲೀಸ್ ಸುಪರ್ದಿಗೆ ನೀಡಲಾಗಿದೆ. ಆಕಾಶ್ ಮತ್ತು ಪ್ರಸನ್ನ ಅವರನ್ನೂ ಬಂಧಿಸಲಾಗಿದ್ದು, ಫೆಬ್ರವರಿ 15 ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.












