ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು‌ ಹೈದರಾಬಾದ್ ನ ಅಪೊಲೋ‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು, ಇದರಿಂದ ಅವರು ಸಾಕಷ್ಟು ಬಳಲಿದ್ದರು.‌ಆದ್ದರಿಂದ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ರಜನಿಕಾಂತ್ ಬಹುನಿರೀಕ್ಷಿತ ‘ಅಣ್ಣಾತೆ’ ಸಿನಿಮಾದ ಶೂಟಿಂಗ್​ಗಾಗಿ ಹತ್ತು ದಿನಗಳಿಂದ ಹೈದರಾಬಾದ್​ನಲ್ಲಿದ್ದರು. ಚಿತ್ರೀಕರಣ ತಂಡದಲ್ಲಿರುವ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

ಡಿ.22ರಂದು ರಜನಿಕಾಂತ್​ ಅವರಿಗೆ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಕೊರೊನಾ ಪರೀಕ್ಷೆಯ ವರದಿಯಲ್ಲಿಯೂ ನೆಗೆಟಿವ್ ಬಂದಿತ್ತು. ನಂತರ ಅವರು ಐಸೊಲೇಷನ್​ನಲ್ಲಿದ್ದರು.

ರಜನಿಕಾಂತ್ ಆರೋಗ್ಯ ಪರಿಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ರಜನಿಕಾಂತ್​ ಅವರ ರಕ್ತದೊತ್ತಡ ಏರುಪೇರಾಗಲು ಕಾರಣ ಏನಿರಬಹುದು ಎಂಬ ಬಗ್ಗೆಯೂ ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ರಕ್ತದೊತ್ತಡ ಸರಿಯಾಗಿ, ಬಳಲಿಕೆಯಿಂದ ಚೇತರಿಸಿಕೊಳ್ಳುವವರೆಗೂ ಡಿಸ್​ಚಾರ್ಜ್​ ಮಾಡುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.