ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟ ಸವಿದು ಸರಳತೆ ಮೆರೆದ ಖ್ಯಾತ ನಿರ್ದೇಶಕ ರಾಜಮೌಳಿ

ಚೆನ್ನೈ: ವಿಶ್ವವನ್ನೇ ಬೆರಗಾಗಿಸುವ ಸಿನಿಮಾಗಳನ್ನು ತೆರೆ ಮೇಲೆ ಮೂಡಿಸುವ ಬಹು ಬೇಡಿಕೆ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿಜ ಜೀವನದಲ್ಲಿ ತುಂಬಾ ಸರಳ ವ್ಯಕ್ತಿಯಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟವನ್ನು ಸವಿದಿದ್ದಾರೆ. ಚೆನ್ನೈ ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರ ನಿಮಿತ್ತ ಆಗಮಿಸಿರುವ ನಾಗಾರ್ಜುನ ಅಕ್ಕಿನೇನಿ ಮತ್ತು ಹಿಂದಿ ಚಿತ್ರರಂಗದ ರಣ್ ಬೀರ್ ಕಪೂರ್ ಕೂಡಾ ರಾಜಮೌಳಿಗೆ ಜೊತೆ ನೀಡಿದ್ದಾರೆ.

ದಕ್ಷಿಣ ಭಾರತೀಯರಿಗೆ ಬಾಳೆ ಎಲೆ ಊಟ ಅಂದರೆ ಬಹಳ ಅಚ್ಚುಮೆಚ್ಚು. ಸಾಮಾನ್ಯ ದಿನವೆ ಇರಲಿ ಹಬ್ಬ ಹರಿದಿನವೆ ಇರಲಿ ದೇವಸ್ಥಾನ, ಹೋಟಲು ಅಥವಾ ಶುಭ ಕಾರ್ಯಕ್ರಮಗಳಲ್ಲಿಯೂ ಬಾಳೆ ಎಲೆ ಊಟ ಸರ್ವೇ ಸಾಮಾನ್ಯ. ಬಾಳೆ ಎಲೆ ಊಟ ಆಹಾರದ ಗುಣವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ದಕ್ಷಿಣ ಭಾರತಕ್ಕೆ ಭೇಟಿ ನೀಡುವ ರಾಷ್ಟ್ರೀಯ ಮತ್ತು ಅಂತರಾಷ್ಟೀಯ ಮಟ್ಟದ ವ್ಯಕ್ತಿಗಳು ಯಾರೇ ಆಗಿರಲಿ ಇಲ್ಲಿನ ಬಾಳೆ ಎಲೆ ಊಟಕ್ಕೆ ಮನಸೋಲದಿರುವುದಿಲ್ಲ. ರಾಜಮೌಳಿ ಮತ್ತು ನಾಗಾರ್ಜುನ ದಕ್ಷಿಣದವರೇ ಆಗಿರುವುದರಿಂದ ಸಹಜವಾಗಿಯೆ ಬಾಳೆ ಎಲೆ ಊಟ ಅವರಿಗೆ ಇಷ್ಟವಾಗಿರುತ್ತದೆ. ಎಷ್ಟೇ ದೊಡ್ಡ ನಿರ್ದೇಶಕ, ನಟನಾಗಿದ್ದರೂ ತಮ್ಮ ಮೂಲ ಬೇರುಗಳನ್ನು ಮರೆಯದಿರುವುದಕ್ಕೆ, ಸರಳತೆ ಮತ್ತು ವಿನಮ್ರತೆಯನ್ನು ಅಳವಡಿಸಿಕೊಂಡಿರುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ತೆಲುಗು ಫಿಲ್ಮ್ ನಗರ್ ಈ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.