ಮಣಿಪಾಲ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಅವರಿಗೆ ಪರ್ಯಾಯ ದರ್ಬಾರ್ ಪ್ರಶಸ್ತಿ

ಉಡುಪಿ: ಗುರುವಾರ ಬೆಳಿಗ್ಗೆ ರಾಜಾಂಗಣದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ
ಪರ್ಯಾಯ ಮಹೋತ್ಸವದಲ್ಲಿ ಮಣಿಪಾಲ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಅವರನ್ನು ‘ಪರ್ಯಾಯ ದರ್ಬಾರ್’ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.

ಡಾ. ರಾಮದಾಸ್ ಪೈ ಮತ್ತು ವಸಂತಿ ಆರ್ ಪೈ ಅವರ ಸುಪುತ್ರರಾಗಿರುವ ಡಾ.ರಂಜನ್ ಪೈ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲವನ್ನು ರಾಷ್ಟ್ರದ ಉನ್ನತ ಹತ್ತುಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸುವಲ್ಲಿ ಮತ್ತು ಕೇಂದ್ರ ಶಿಕ್ಷಣ ಮಂತ್ರಾಲಯದಿಂದ ಶ್ರೇಷ್ಠ ಸ್ಥಾನಮಾನ ಗಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಮ್ಮ ನೇತೃತ್ವದಲ್ಲಿ ರಾಜಸ್ಥಾನದ ಜೈಪುರ, ಜಾರ್ಖಂಡ್ ನ ಜಮ್ ಶೆಡ್ ಪುರ , ಸಿಕ್ಕಿಂ , ಮಲೇಷ್ಯಾ ದುಬೈ ಹಾಗೂ ಅಂಟಿಗುವಾಗಳಲ್ಲಿಯೂ ಮಣಿಪಾಲ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿದ್ದಾರೆ.

ಇಂದು ದೇಶದ ಎರಡನೇ ಬೃಹತ್ ಹಾಸ್ಪಿಟಲ್ ಚೈನ್ ಆಗಿರುವ ಮಣಿಪಾಲ ಆಸ್ಪತ್ರೆಯು 9000ಕ್ಕಿಂತಲೂ ಹೆಚ್ಚು ಹಾಸಿಗೆ ಸೌಲಭ್ಯದೊಂದಿಗೆ ಪ್ರತೀ ದಿನ 2 ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತ, ಸಾವಿರಾರು ಜನರಿಗೆ ಉದ್ಯೋಗದಾತರಾಗಿ ಸಮಾಜಪರ ಕಾಳಜಿಯ ಉದ್ಯಮಿ ಎಂಬ ವಿಶ್ವಮಟ್ಟದ ಮನ್ನಣೆಗೆ ಪಾತ್ರರಾಗಿರುವ ಡಾ. ರಂಜನ್ ಪೈ ಅವರು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ ಸಂಸ್ಥೆಗಳ ಕ್ರಿಯೇಟಿವ್ ಡೈರೆಕ್ಟರ್ ಆದ ಸಹ ಧರ್ಮಿಣಿ ಶ್ರುತಿ ಆರ್ ಪೈ ಮತ್ತು ಮಕ್ಕಳಾದ ಸಾನ್ಯ ಹಾಗೂ ರಿಯಾ ಇವರೊಂದಿಗೆ ನೆಮ್ಮದಿಯ ಜೀವನ
ನಡೆಸುತ್ತಿದ್ದಾರೆ.

ಪರ್ಯಾಯ ದರ್ಬಾರ್ ಪ್ರಶಸ್ತಿಗೆ ಭಾಜನರಾದ ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ , ಕುಲಪತಿ ಲೆಫಿಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮತ್ತು ಮಾಹೆ ಮಣಿಪಾಲದ ಸಂಪೂರ್ಣ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.