ಬೆಂಗಳೂರು: ದೋಸ್ತಿ ಸರಕಾರದ ರಾಜೀನಾಮೆ ಪರ್ವ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸರ್ಕಾರ ಪತನಗೊಳ್ಳುವ ಭೀತಿಯಲ್ಲಿದ್ದ ದೋಸ್ತಿ ಸರ್ಕಾರ ಸುಪ್ರೀಂ ಆದೇಶದ ಬೆನ್ನಲ್ಲೇ ವಿಶ್ವಾಸ ಮತ ಯಾಚನೆಯ ಚಿಂತನೆ ನಡೆಸಿದೆ.
ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನಗೊಳ್ಳುವ ಭೀತಿಯಲ್ಲಿತ್ತು. ಆದರೆ ಸ್ಪೀಕರ್ ನಡೆ ಅತೃಪ್ತ ಶಾಸಕರಿಗೆ ಕೊಂಚ ತಲೆನೋವು ನೀಡಿತ್ತು. ಒಂದೆಡೆ ರಾಜೀನಾಮೆ ಅಂಗೀಕಾರವಾಗದ ತಲೆನೋವಾದರೆ ಮತ್ತೊಂದೆಡೆ ಮನವೊಲಿಸಲು ಬಂದಿದ್ದ ನಾಯಕರನ್ನು ಎದುರಿಸಲಾಗದ ಪರಿಸ್ಥಿತಿ. ಹೀಗಿರುವಾಗ ಅತೃಪ್ತ ನಾಯಕರು ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡಾ ಮುಂದಿನ ಆದೇಶದವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅನರ್ಹತೆ ಮತ್ತು ರಾಜೀನಾಮೆಯ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಈ ಆದೇಶ ಕೇಳಿದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚಿಸುವ ದಾಳ ಎಸೆದಿದ್ದಾರೆ. ಸದ್ಯ ಸಿಎಂ ನಡೆ ಬಿಜೆಪಿ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ಬೀಳಲಿದೆ ಎಂದು ನಿರಾಳವಾಗಿದ್ದ ಬಿಜೆಪಿ ನಾಯಕರು ಸದ್ಯ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಿದ್ದಾರೆ.
.












