ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯನ್ನಾಗಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಎಸ್ಪಿ ದರ್ಜೆಯಲ್ಲಿದ್ದ ರವಿಕಾಂತೇಗೌಡ ಅವರಿಗೂ ಬಡ್ತಿ ದೊರಕಿದ್ದು, ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎಂಜಿನಿಯರಿಂಗ್ ಪದವೀಧರರಾ ಗಿರುವ ಲಕ್ಷ್ಮೀಪ್ರಸಾದ್, 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಾಗಲಕೋಟೆ ಸಹಾಯಕ ಎಸ್ಪಿ, ವಿಜಯಪುರ ಮತ್ತು ನಕ್ಸಲ್ ನಿಗ್ರಹ ಪಡೆ ಎಸ್ಪಿ ಹುದ್ದೆಯಲ್ಲಿ ಕೆಲಸ ಮಾಡಿದ ಇವರು, ಪ್ರಸ್ತುತ ಆಂತರಿಕ ಭದ್ರತಾ ವಿಭಾಗದ ಭಯೋತ್ಪದನಾ ತಡೆ ಕೇಂದ್ರದ ಎಸ್ಪಿ ಹುದ್ದೆಯಲ್ಲಿದ್ದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನವರಾದ ಲಕ್ಷ್ಮೀಪ್ರಸಾದ್ ಅವರ ಪೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದರು. ಎಂಜಿನಿಯರಿಂಗ್ ಪದವಿಯ ಬಳಿಕ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದರು.