ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಭೂಪಟದಲ್ಲಿಡಲು ಬ್ಲಾಗರ್ಸ್ ಮೀಟ್ ಆಯೋಜಿಸಿದ ಜಿಲ್ಲಾಡಳಿತ

ಉಡುಪಿ: ಜಿಲ್ಲೆಯು ಪ್ರವಾಸಿ ತಾಣಗಳಿಗೆ ಪ್ರಸಿದ್ದಿ ಹೊಂದಿದ್ದು, ಇಲ್ಲಿನ ಬೀಚ್ ಮತ್ತು ದೇವಾಲಯಗಳಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ತಿಳಿಸಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ.

ಸಾರ್ವಜನಿಕರಿಗೆ ಯಾವುದೇ ವಿಷಯಗಳು ಮತ್ತು ಯೋಜನೆಗಳ ಬಗ್ಗೆ ಪ್ರಚಾರ ನೀಡುವಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬ್ಲಾಗರ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಭರಾಟೆ ಜೋರಾಗಿದ್ದು, ಕ್ಷಣ ಮಾತ್ರದಲ್ಲಿ ಮಾಹಿತಿಗಳನ್ನು ತಲುಪಿಸುತ್ತವೆ. ಇವುಗಳನ್ನು ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರಸಿದ್ದ ಪ್ರವಾಸಿ ಬ್ಲಾಗರ್ ಗಳನ್ನು ಜಿಲ್ಲೆಗೆ ಆಹ್ವಾನಿಸಿ ಅವರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಗುತ್ತಿದೆ.

ಈ ಬ್ಲಾಗರ್ ಮೀಟ್ ಕಾರ್ಯಕ್ರಮಕ್ಕೆ ಗೋವಾದಿಂದ 4, ಹೈದ್ರಾಬಾದ್ ನಿಂದ 1, ಜಾರ್ಖಂಡ್ ನಿಂದ 1, ಬೆಂಗಳೂರು ಮತ್ತು ಮಂಗಳೂರಿನಿಂದ ತಲಾ 3 ಮತ್ತು ಮಥುರಾದಿಂದ 1 ಬ್ಲಾಗರ್ ಆಗಮಿಸಿದ್ದು, ಈ ಎಲ್ಲಾ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಈ ಬ್ಲಾಗರ್ ಗಳು ಒಟ್ಟು 8 ಲಕ್ಷಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಇದುವರೆಗೆ ತಾವು ಬರೆದ ಲೇಖನಗಳಿಗೆ 3 ಕೋಟಿಗೂ ಅಧಿಕ ವೀಕ್ಷಣೆಗಳ ದಾಖಲೆ ಹೊಂದಿದ್ದಾರೆ. ಇಲಾಖೆಯ ವತಿಯಿಂದ ಇವರೆಲ್ಲರನ್ನು 2 ದಿನಗಳ ಕಾಲ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ಕರೆದೊಯ್ದು ಪ್ರವಾಸಿ ತಾಣಗಳ ವೀಕ್ಷಣೆ, ಮಾಹಿತಿ, ಅಲ್ಲಿನ ಸೌಲಭ್ಯಗಳು, ವಿಶೇಷತೆಗಳ ಕುರಿತ ಸಂಪೂರ್ಣ ಚಿತ್ರಣದ ಮಾಹಿತಿಯನ್ನು ನೀಡಲಿದ್ದು, ಈ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಈ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆದು, ಪೂರಕವಾಗಿ ವೀಡಿಯೋಗಳು, ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ದೇಶ- ವಿದೇಶದ ಕೋಟ್ಯಂತರ ಜನರನ್ನು ಆಕರ್ಷಿಸಲಿದ್ದಾರೆ.

ಈ ಬ್ಲಾಗರ್ ಗಳಲ್ಲಿ ಆರ್.ಜೆ ಗಳು ಮತ್ತು ಯು ಟ್ಯೂಬ್ ಅಡ್ಮಿನ್ ಗಳೂ ಇದ್ದು, ಉಡುಪಿ ಜಿಲ್ಲೆಯ ಮಲ್ಪೆ ಬೀಚ್ , ಸೀ ವಾಕ್, ಹೌಸ್ ಬೋಟ್, ಕಯಾಕಿಂಗ್ ಪ್ರದೇಶಗಳು, ಹಸ್ತಶಿಲ್ಪ ಗ್ರಾಮ, ಶ್ರೀ ಕೃಷ್ಣ ಮಠ, ಕಾಪು ಲೈಟ್ ಹೌಸ್, ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್, ಅತ್ತೂರು ಚರ್ಚ್, ಚರ್ತುಮುಖ ಬಸದಿ, ಕಾರ್ಕಳ ಗೊಮ್ಮಟ ಬೆಟ್ಟ, ಸೈಂಟ್ ಮೇರಿಸ್ ಐಲ್ಯಾಂಡ್, ವರಂಗ ಕೆರೆ ಬಸದಿ, ಸಾಲು ಮರದ ತಿಮ್ಮಕ ಟ್ರೀ ಪಾರ್ಕ್
ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ 2 ದಿನಗಳ ಕಾಲ ಭೇಟಿ ನೀಡಲಿದ್ದಾರೆ. ತಾವು ಸಂಗ್ರಹಿಸಿದ ಪೊಟೋ, ವೀಡಿಯೋ ಮತ್ತು ವರದಿಯನ್ನು ದೇಶದ ವಿವಿಧ ರಾಜ್ಯಗಳ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಗಳ ವೆಬ್‍ಸೈಟ್ ಗೆ ಲಿಂಕ್ ಮಾಡುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸಲಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನುಮತಿಗಳನ್ನು ನೀಡುವಾಗ ಅಗತ್ಯವಿರುವ ನಿಯಮಗಳಲ್ಲಿ ಸರಳೀಕೃತ ಮತ್ತು ಆನ್‍ಲೈನ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.