ಕರಾವಳಿ ತೀರದಲ್ಲಿ ಅಂತರ್ಜಲ ನಿಕ್ಷೇಪಗಳ ಪತ್ತೆ, ಮಣಿಪಾಲ ಸಂಶೋಧಕರಿಂದ ಅನ್ವೇಷಣೆ..!!

ಉಡುಪಿ : ಎಂ.ಐ.ಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಬಾಲಕೃಷ್ಣ, ಡಾ. ಹೆಚ್. ಎನ್. ಉದಯಶಂಕರ್ ಹಾಗೂ ಸಂಶೋಧನಾ ವಿದ್ಯಾರ್ಥಿ ಶ್ರೀ ಲಿನೋ ಯೋವನ್ ನೇತೃತ್ವದ ಸಂಶೋಧನಾ ತಂಡವು, ಉಡುಪಿ ಜಿಲ್ಲೆಯ ಬೀಜಾಡಿ, ಕಾಪು, ಮಲ್ಪೆ, ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ದೊಡ್ಡ ಪ್ರಮಾಣದಲ್ಲಿ, ಅಂತರ್ಜಲವು ಒರತೆಯ ರೂಪದಲ್ಲಿ ಅರಬ್ಬಿ ಸಮುದ್ರದೆಡೆಗೆ ಹೊರಸೂಸುವುದನ್ನು ವರದಿ ಮಾಡಿದ್ದಾರೆ.

ಅವರ ಸಂಶೋಧನೆಯು ನೆದರ್ಲ್ಯಾಂಡ್ ಮೂಲದ ಎಲೆವಿಯರ್ ಪ್ರಕಟಿತ ವೈಜ್ಞಾನಿಕ ನಿಯತಕಾಲಿಕ “ಜರ್ನಲ್ ಆಫ್ ಹೈಡ್ರಾಲಜಿ”ಯ ಮೇ 2023 ರ ಸಂಚಿಕೆಯಲ್ಲಿ ಪ್ರಕಟವಾಗುತ್ತಿದೆ. (ಪೂರ್ಣಲೇಖನ ಈ ಜಾಲತಾಣದಲ್ಲಿ (https://doi.org/10.1016/j.jhydrol.2023.129394). ಉಡುಪಿ ಜಿಲ್ಲೆಯಲ್ಲಿ ನೀರಿನ ಸಂಪನ್ಮೂಲಗಳು ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಈ ಸಂಶೋಧನೆಯು ಪ್ರಾಮುಖ್ಯ ಪಡೆದಿದೆ.

ಸಮುದ್ರ ತೀರದಲ್ಲಿ ಕಾಣಸಿಗುವ ಈ ಒರತೆಯು, ತಾಜಾ ಅಂತರ್ಜಾಲದ ಸಂಭಾವ್ಯ ಮೂಲವಾಗಿದ್ದು ಸಮುದ್ರದ ಪಾಲಾಗುತ್ತಿದೆ. ಈ ಸಿಹಿ ನೀರಿನ ಒಂದು ಭಾಗವನ್ನು ಸುಸ್ಥಿರವಾಗಿ ನಿಯಂತ್ರಿತ ರೀತಿಯಲ್ಲಿ ಕುಡಿಯುವ ನೀರಾಗಿ ಬಳಸಲು ಸಾಧ್ಯವಾದಲ್ಲಿ, ನೀರಿನ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸಬಹುದು. ನದಿಗಳು ನೀರನ್ನು ಸಾಗರಕ್ಕೆ ಪ್ರವಹಿಸುವಂತೆ ಭೂಮಿಯಡಿಯಲ್ಲಿ ಹುದುಗಿರುವ ಅಂತರ್ಜಾಲವು ನದಿಗಳು ಪ್ರವಹಿಸಿದ ಶೇಕಡಾ 10 ರಷ್ಟು ಸಿಹಿ ನೀರನ್ನು ಸಾಗರದೆಡೆಗೆ ಪ್ರವಹಿಸುವುದನ್ನು ಇತರೆಡೆ ನಡೆದ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

ಆದಾಗ್ಯೂ, ಭಾರತದ ಸುಮಾರು 7,500 ಕಿ.ಮೀ. ಉದ್ದದ ಕರಾವಳಿಯಾದ್ಯಂತ ಇಂತಹ ಯಾವುದೇ ಸಂಶೋಧನೆಗಳು ವರದಿಯಾಗದಿರುವುದು ಗಮನಾರ್ಹ, ಇದರ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತ ಸರಕಾರದ ಭೂವಿಜ್ಞಾನ ಸಚಿವಾಲಯವು ತಿರುವನಂತಪುರದ ರಾಷ್ಟ್ರೀಯ ಭೂವಿಜ್ಞಾನ ಅಧ್ಯಯನ ಕೇಂದ್ರಕ್ಕೆ (NCESS) ಈ ಜವಾಬ್ದಾರಿಯನ್ನು ವಹಿಸಿದೆ.

ಎಂ.ಐ.ಟಿ ಮಣಿಪಾಲವು ಈ ಸಂಸ್ಥೆಯ ಪ್ರಮುಖ ಪಾಲುದಾರರಾಗಿದ್ದು ಉಡುಪಿ – ಉತ್ತರಕನ್ನಡ ಕರಾವಳಿಯ ನಿಕ್ಷೇಪಗಳ ಪತ್ತೆ ಕಾರ್ಯವನ್ನು ಪ್ರಕೃತ ನಡೆಸುತ್ತಿದೆ.ಈ ಸಂಶೋಧನ ವರದಿಯ ಅಗ್ರ ಲೇಖಕರಾದ ಶ್ರೀ ಲಿನೊ ಯೋವನ್ ಅಭಿಪ್ರಾಯದ ಪ್ರಕಾರ, ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಹೊರಸೂಸಲ್ಪಡುತ್ತಿರುವ ಗಮನಾರ್ಹ ಪ್ರಮಾಣದ ಅಂತರ್ಜಲವು ಇಲ್ಲಿ ಬೀಳುತ್ತಿರುವ ಭಾರೀ ಮಳೆ ಹಾಗೂ ಈ ಪ್ರದೇಶದ ಭೂ ಮೇಲೆಯಲ್ಲಿ ಹರಡಿರುವ ಸುಮಾರು 40,000 ವರ್ಷ ಹಳೆಯ ಜಲಭರಿತ ಮಡ್ಡಿಯ ನಿಕ್ಷೇಪಗಳಿಂದ ಸಾಧ್ಯವಾಗಿದೆ.

ಈ ವಿಶೇಷ ಮಡ್ಡಿಯು ಗಣನೀಯ ಪ್ರಮಾಣದ ಮಳೆನೀರನ್ನು ತನ್ನೊಡನೆ ಹುದುಗಿಸಿ, ಸಮುದ್ರದೆಡೆಗೆ ಪ್ರವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರಮಾಣದ ಅಂತರ್ಜಲ ಹೊರಸೂಸುವಿಕೆಯಿಂದ ಈ ಪ್ರದೇಶಗಳನ್ನು ಸಂಭಾವ್ಯ ಉಪ್ಪು ನೀರು ಒಳನುಗ್ಗುವಿಕೆಯಿಂದ ರಕ್ಷಿಸುತ್ತದೆ. ಇನ್ನೊಂದು ಕೋನದಲ್ಲಿ ಈ ವಿದ್ಯಮಾನವನ್ನು ಗಮನಿಸುವುದಾದರೆ, ಈ ಅಂತರ್ಜಲವು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಅರಬ್ಬಿ ಸಮುದ್ರಕ್ಕೆ ಪ್ರವಹಿಸುತ್ತದೆ.