ಮಾ. 6-8: ತಿಂಗಳೆ ಧರ್ಮ ದೈವ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ

ಉಡುಪಿ: ತಿಂಗಳೆ ಪ್ರತಿಷ್ಠಾನ ವತಿಯಿಂದ ಮಾರ್ಚ್ 6 ರಿಂದ 8 ರವರೆಗೆ ತಿಂಗಳೆಯಲ್ಲಿ ಧರ್ಮ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 6ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮವನ್ನು ವಾದಿರಾಜ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಗ್ರಾಮೀಣ ಭಾಗದ ಕ್ರೀಡೆಗಳು ಹಾಗೂ ಜನಪದ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ 9.30 ಕ್ಕೆ ಕ್ರೀಡೋತ್ಸವ ಆರಂಭವಾಗಲಿದ್ದು, ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ. 7 ರಂದು ರಾತ್ರಿ‌ 7 ಗಂಟೆಗೆ ಬ್ರಹ್ಮಬೈದರ್ಕಳ ಅಗಲುಸೇವೆ, ರಾತ್ರಿ 9 ಗಂಟೆಗೆ ಕೊಡಮಣಿತ್ತಾಯ ನೇಮ ಹಾಗೂ ಕುಕ್ಕಿನಂತ್ತಾಯ ನೇಮ ಜರುಗಲಿದೆ ಎಂದರು.

ಅಪ್ಪಣ್ಣ ಹೆಗ್ಡೆ ಇವರಿಗೆ ತಿಂಗಳೆ ಪ್ರಶಸ್ತಿ:

ಮಾ.8 ರಂದು ಸಂಜೆ ನಡೆಯುವ ಸಾಹಿತ್ಯೋತ್ಸವದಲ್ಲಿ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರಿಗೆ ತಿಂಗಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ್ ಅಡಿಗ ಅವರಿಗೆ ಸೇವಾ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಂಜೆ 6 ಗಂಟೆಯಿಂದ ಆಳ್ವಾಸ್ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ‌ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ತಿಂಗಳೆ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆಳಚಾವಡಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಕಿರಣ್ ಕುಮಾರ್ ಬೈಲೂರು, ಸದಾನಂದ, ರಮೇಶ್ ಶೆಟ್ಟಿ ನಡ್ಪಾಲು ಗ್ರಾ.ಪಂ ಅಧ್ಯಕ್ಷ ನವೀನ್ ಕುಮಾರ್ ಉಪಸ್ಥಿತರಿದ್ದರು.