ಉಡುಪಿ: ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (NSD) ಆಯೋಚಿಸುತ್ತಿರುವ 25ನೇ ಭಾರತ ರಂಗ ಮಹೋತ್ಸವ- 2026ಕ್ಕೆ ಉಡುಪಿ ಜಿಲ್ಲೆಯ ಪರ್ಕಳದ ಅಂಬಾಭವಾನಿ ಕಲಾ ಆರ್ಟ್ಸ್ ತಂಡದ ನಾಟಕ “ಶ್ರೀ ದೇವಿ ಮಹಾತ್ಮೆ” ಆಯ್ಕೆಯಾಗಿದೆ. ಈ ನಾಟಕವು 2026ರ ಫೆಬ್ರವರಿ 3ರಂದು ನವದೆಹಲಿ ಮಂಡಿ ಹೌಸ್ನ ರಾಷ್ಟ್ರೀಯ ನಾಟಕ ಶಾಲೆಯ ಮುಕ್ತ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಂಯೋಜಕ ಅಶೋಕ್ ನಾಯ್ಕ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಅವರು, ದೇಶ-ವಿದೇಶಗಳಿಂದ ಆಯ್ಕೆಯಾದ 200ಕ್ಕೂ ಹೆಚ್ಚು ನಾಟಕಗಳ ನಡುವೆ ನಮ್ಮ ಉಡುಪಿ ಜಿಲ್ಲೆಯ ತಂಡಕ್ಕೆ ಈ ಗೌರವ ಲಭಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ಅಂಬಾಭವಾನಿ ಕಲಾ ಆರ್ಟ್ಸ್ ತಂಡವು 2007ರಲ್ಲಿ ಸ್ಥಾಪಿತವಾದ ಶ್ರೀ ಅಂಬಾಭವಾನಿ ಮರಾಟಿ ಸಾಂಸ್ಕೃತಿಕ ಕಲಾ ವೇದಿಕೆ ಪರ್ಕಳ ವಲಯ (ನೋಂದಾಯಿತ) ಇದರ ಉಪಸಂಸ್ಥೆಯಾಗಿದೆ. ಯಕ್ಷಗಾನ, ನಾಟಕ, ಚೆಂಡೆ. ನಾಸಿಕ್ ಬ್ಯಾಂಡ್ ಸೇರಿದಂತೆ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಈ ತಂಡವು ಮೈಸೂರು ದಸರಾ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದು, ರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಗುರುತು ಮೂಡಿಸಿದೆ. ಭುವನ್ ಮಣಿಪಾಲ ಅವರು ಯಕ್ಷಗಾನದ ಸಾಂಪ್ರದಾಯಿಕ ಶೈಲಿಯನ್ನು ಸಮಕಾಲೀನ ರಂಗಭೂಮಿಯೊಂದಿಗೆ ಸಂಯೋಜಿಸಿರುವ ಈ ನಾಟಕವು 90 ನಿಮಿಷಗಳ ರೂಪಾಂತರಿತ ಪ್ರದರ್ಶನವಾಗಿದೆ ಎಂದು ತಿಳಿಸಿದರು.

















