ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುದಾನ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಉಡುಪಿ: ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2.25 ಕೋಟಿ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕೊರಗರ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೊರಗ ಸಮುದಾಯದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ‌ ಆರಂಭಿಸಿದರು.
ಕೊರಗ ಸಮುದಾಯದ ಸಂಘಟನೆ ತಯಾರಿಸಿದ ಜನ ಯೋಜನೆಯನ್ನು ಕೈಬಿಟ್ಟು, ಅಧಿಕಾರಿಗಳು ತಯಾರಿಸಿದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ನಿಗಮ ಹೊರಟಿದೆ. ಇದರಿಂದ ಆದಿವಾಸಿ ಜನಾಂಗದವರಿಗೆ ಸರಿಯಾದ ಅನುದಾನ ಹಂಚಿಕೆ ಆಗಲ್ಲ. ಅಲ್ಲದೆ, ಅಧಿಕಾರಿಗಳು ತಯಾರಿಸಿದ ಯೋಜನೆಯಲ್ಲಿ ಮೀನುಗಾರಿಕೆ ಸೇರಿದಂತೆ ಕೊರಗ ಸಮುದಾಯದವರು ಮಾಡದ ವೃತ್ತಿಗಳಿಗೆ ಅನುದಾನ ಮೀಸಲಿಡಲಾಗಿದೆ. ಹೀಗೆ ಅಧಿಕಾರಿಗಳು ತಯಾರಿಸಿದ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ.
ಹಾಗಾಗಿ ಸಂಘಟನೆಯ ಸದಸ್ಯರು ಸಲ್ಲಿಸಿದ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು
ಪ್ರತಿಭಟನಾಕಾರರು ಒತ್ತಾಯಿಸಿದರು.
ಅರಣ್ಯ ಮೂಲ ಬುಡಗಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಶೀಲಾ ನಾಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೇಂದ್ರ ಸರ್ಕಾರ 2.25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರಂತೆ ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ನಾವು ಕ್ರಿಯಾ ಯೋಜನೆ ತಯಾರಿಸಿ ಕೊಟ್ಟಿದ್ದೇವೆ. ಆದರೆ‌ ನಿಗಮವು ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಅನುದಾನ ಅನುಷ್ಠಾನಗೊಳಿಸುತ್ತಿಲ್ಲ.
ಬದಲಾಗಿ ಅಧಿಕಾರಿಗಳೇ ಬೇರೊಂದು ಕ್ರಿಯಾ ಯೋಜನೆ ತಯಾರಿಸಿ ಅದರಲ್ಲಿ ಕೊರಗ ಸಮುದಾಯಕ್ಕೆ ಉಪಯೋಗವಾಗದ ಯೋಜನೆಗಳನ್ನು ಸೇರಿಸಿದ್ದಾರೆ. ನಮ್ಮ
ಬೇಡಿಕೆಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದರು.
ಕೊರಗರ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪುತ್ರನ್‌ ಹೆಬ್ರಿ, ಕೇರಳ ಹಾಗೂ ಕರ್ನಾಟಕ
ಕೊರಗರ ಅಭಿವೃದ್ಧಿ ಒಕ್ಕೂಟಗಳ ಅಧ್ಯಕ್ಷೆ ಅಮ್ಮಣ್ಣಿ ಕೊರಗ ಚೋರಾಡಿ, ಬೊಗ್ರ
ಕೊಕ್ಕರ್ಣೆ, ಕುಮಾರ ಕೆಂಜೂರು, ದಿವಾಕರ್‌ ಕಳತ್ತೂರು, ಸಂಜೀವ ಬಾರ್ಕೂರು, ಗಿರಿಜಾ
ಧರಣಿಯಲ್ಲಿ ಪಾಲ್ಗೊಂಡಿದ್ದರು.