ಸರ್ಕಾರಿ ಕಚೇರಿಯ ಹೊರಗುತ್ತಿಗೆ ನೌಕರರ ಕುಂದುಕೊರತೆಗಳನ್ನು ಕ್ಲಪ್ತ ಸಮಯದಲ್ಲಿ ಬಗೆಹರಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್

ಉಡುಪಿ: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಸೇರಿದಂತೆ ಮತ್ತಿತರ ನೌಕರರ ಕುಂದು ಕೊರತೆಗಳನ್ನು ಕ್ಲಪ್ತ ಸಮಯದಲ್ಲಿ ಬಗೆಹರಿಸಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಸಿಬ್ಬಂದಿ ವರ್ಗದವರ ವೇತನ ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೇ ಮಾಡಿಕೊಟ್ಟು ಕಚೇರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿದರೆ ಕಚೇರಿಯ ದೈನಂದಿನ ಕೆಲಸ ಕಾರ್ಯಗಳು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಗುರುವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ನೌಕರರ ರಾಜ್ಯ ವಿಮಾ ನಿಗಮ, ಉದ್ಯೋಗಿಗಳ ಭವಿಷ್ಯ ನಿಧಿ ಇವರ ಸಹಯೋಗದಲ್ಲಿ ನಡೆದ ಹೊರಗುತ್ತಿಗೆ ಸಿಬ್ಬಂದಿಗಳ ಇಎಸ್‌ಐ ಮತ್ತು ಇಪಿಎಫ್ ಬಗ್ಗೆ ಪ್ರಧಾನ ಮಾಲೀಕರು ಮತ್ತು ಗುತ್ತಿಗೆದಾರರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸರ್ಕಾರಿ ಕಚೇರಿ, ನಿಗಮ ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ವೇತನದೊಂದಿಗೆ ಪಾವತಿಸುವ ಇಎಸ್‌ಐ ಮತ್ತು ಇಪಿಎಫ್ ಕಡಿತಗಳ ಬಗ್ಗೆ ಎಲ್ಲಾ ಅಧಿಕಾರಿಗಳು ಮಾಹಿತಿ ಹೊಂದಿರಬೇಕು, ಒಂದೊಮ್ಮೆ ಅವರುಗಳಿಗೆ ಈ ಸೌಲಭ್ಯಗಳು ಲಭಿಸದೇ ಇದ್ದಲ್ಲಿ ಸಂಬಂಧಿಸಿದ ಗುತ್ತಿಗೆದಾರರರಿಂದ ಅವುಗಳನ್ನು ದೊರಕಿಸಲು ಕ್ರಮವಹಿಸಬೇಕು ಎಂದರು.

ಬಟವಾಡೆ ಅಧಿಕಾರಿ, ಅಧೀಕ್ಷಕರು, ಗುಮಾಸ್ತರು ಸೇರಿದಂತೆ ಮತ್ತಿತರೆ ಇಲಾಖಾ ಸಿಬ್ಬಂದಿಗಳು ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳು ಪಾವತಿಗಳನ್ನು ಮಾಡುವಾಗ ಮುನ್ನೆಚ್ಚರಿಕೆ ವಹಿಸಿದರೆ ಗೊಂದಲವಿಲ್ಲದ ಪಾವತಿಗೆ ಅನುಕೂಲವಾಗುತ್ತದೆ ಈ ಹಿನ್ನಲೆಯಲ್ಲಿ ಈ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ದೈನಂದಿನ ಕಚೇರಿ ಕೆಲಸಗಳನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಪ್ರತೀ ತಿಂಗಳು ಹೊರಗುತ್ತಿಗೆ ನೌಕರರ ವೇತನ ಬಿಲ್ ತಯಾರಿಸುವಾಗ ಗುತ್ತಿಗೆದಾರರು ಇಎಸ್‌ಐ ಮತ್ತು ಇಪಿಎಫ್ ಕಡಿತಗೊಳಿಸಿ, ಸರ್ಕಾರ ಮತ್ತು ನೌಕರರ ಖಾತೆಗಳಿಗೆ ಪಾವತಿ ಮಾಡಿರುವ ಬಗ್ಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗುತ್ತಿಗೆದಾರರಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಬೇಕು ಎಂದರು.

ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಇಎಸ್‌ಐ ಸೌಲಭ್ಯದ ಕುರಿತು ಮಂಗಳೂರು ಇಎಸ್‌ಐ ಪ್ರಾದೇಶಿಕ ಕಚೇರಿಯ ಸಾಮಾಜಿಕ ಭದ್ರತಾ ಅಧಿಕಾರಿ ಅಭಿಷೇಕ್ ತೋಮರ್, ಇಪಿಎಫ್ ಕುರಿತು ಉಡುಪಿ ಪ್ರಾದೇಶಿಕ ಇಪಿಎಫ್ ಕಚೇರಿಯ ಜಾರಿ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಹೊರಗುತ್ತಿಗೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.