‘ಡೇರ್​ ಡೆವಿಲ್​ ಮುಸ್ತಫಾ’ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಕೆ ,ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ

ಒಳ್ಳೆಯ ಸಿನಿಮಾಗಳು ತೆರೆ ಕಂಡಾಗ ಖಂಡಿತವಾಗಿಯೂ ಜನರು ಬೆಂಲಿಸುತ್ತಾರೆ ಅನ್ನೋ ನಂಬಿಕೆ ಗಾಂಧಿನಗರದಲ್ಲಿದೆ. ಅದಕ್ಕೆ ‘ಡೇರ್​ ಡೆವಿಲ್​ ಮುಸ್ತಫಾ’ ಉದಾಹರಣೆ. ಈ ಸಿನಿಮಾ ಮೇ 19ಕ್ಕೆ ತೆರೆ ಕಂಡಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಥಿಯೇಟರ್​ಗಳಲ್ಲಿ ಬಂದು ನೋಡುವವರ ಸಂಖ್ಯೆ ಕಡಿಮೆಯಾಗಿದೆ.

ಇಂತಹ ಹೊತ್ತಿನಲ್ಲಿ ಕನ್ನಡ ಸಿನಿಮಾವೊಂದು ಯಶಸ್ವಿಯಾಗಿ 50 ದಿನ ಪೂರೈಸಿದೆ. ಇದೀ ಬರೀ ಚಿತ್ರತಂಡ ಮಾತ್ರವಲ್ಲ, ಇಡೀ ಚಿತ್ರರಂಗವೇ ಖುಷಿಪಡುವ ವಿಚಾರ. ಅಂತಹ ಯಶಸ್ಸಿಗೆ ಕಾರಣವಾದದ್ದು ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಡೇರ್​ ಡೆವಿಲ್​ ಮುಸ್ತಫಾ’ ಸಿನಿಮಾ.

ಹೌದು. ಈ ಚಿತ್ರವು ಥಿಯೇಟರ್​ನಲ್ಲಿ ಬರೋಬ್ಬರಿ ಐವತ್ತು ದಿನ ಪೂರೈಸಿ, ಓಟಿಟಿ ಪ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲೂ ಭರಪೂರ ಮೆಚ್ಚುಗೆ ಪಡೆಯುತ್ತಿದೆ. ಈ ಖುಷಿ ವಿಚಾರವನ್ನು ಚಿತ್ರತಂಡ ಸೆಲೆಬ್ರೇಟ್​ ಮಾಡಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಐವತ್ತು ದಿನದ ಸಂಭ್ರಮಾಚರಣೆಯಲ್ಲಿ ಇಡೀ ತಂಡಕ್ಕೆ ಗೆಲುವಿನ ಪಾರಿತೋಷಕ ನೀಡಿ ಗೌರವಿಸಲಾಯಿತು. ಜೊತೆಗೆ ಬಿರಿಯಾನಿ, ಪುಳಿಯೋಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫಾ ತಂಡ ಖುಷಿಪಟ್ಟಿತು.
ಈ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ನಟ ಧನಂಜಯ್ ಮಾತನಾಡಿ, “ನಾನು ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ. ಶಶಾಂಕ್ ಕಾಲೇಜ್​ನಲ್ಲಿ ನನಗೆ ಜೂನಿಯರ್. ಅಲ್ಲಿಂದನೂ ನೋಡ್ತಾ ಇದ್ದೆ. ತುಂಬಾ ಜನ ನಿರ್ದೇಶಕರು ಆಗಬೇಕು ಎಂದು ಇಂಡಸ್ಟ್ರಿಗೆ ಬರುತ್ತಾರೆ. ನಾನು ಕಥೆ ಮಾಡಿದ್ದೇನೆ, ಇನ್ವೆಸ್ಟ್ ಮಾಡಿ ಅಂತಾರೇ. ನಾನು ಅವರಿಗೆ ಶಶಾಂಕ್ ಅವರನ್ನು ಉದಾಹರಣೆಯಾಗಿ ಕೊಟ್ಟು ಕಳಿಸುತ್ತೇನೆ.‌ ಸೀದಾ ಬಂದು ಕಥೆ ಮಾಡಿದ್ದೇನೆ, ಕೋಟ್ಯಂತರ ರೂಪಾಯಿ ದುಡ್ಡು ಹಾಕಿ ಎಂದರೆ ಕಷ್ಟವಾಗುತ್ತದೆ. ಡೇರ್ ಡೆವಿಲ್ ಮುಸ್ತಫಾವನ್ನು ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್​ನಲ್ಲಿ‌ ಕುಳಿತು ನೋಡಿ ಸೆಲೆಬ್ರೇಟ್​ ಮಾಡುವ ಸಿನಿಮಾವಿದು. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಈ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ” ಎಂದರು.