ರಾಮನಗರ ಕರಗ ಉತ್ಸವದಲ್ಲಿ ʻಡಿ ಬಾಸ್ʼ, ʻಡಿ ಬಾಸ್ʼ ಘೋಷಣೆ – ಗರಂ ಆದ ಸಿಎಂ

ರಾಮನಗರ: ಇಲ್ಲಿನ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್, ಡಿ ಬಾಸ್ʼ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ (Darshan Fans) ಘೋಷಣೆ ಜೋರಾಗಿದ್ದು, ಭಾಷಣಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು. ಕಾರ್ಯಕ್ರಮದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ವೇದಿಕೆಯಲ್ಲಿದ್ದವರು ಅಭಿಮಾನಿಗಳನ್ನ ಶಾಂತಗೊಳಿಸಲು ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್ʼ ಜೈಕಾರ ಕೂಗುತ್ತಲೇ ಇದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಲಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ತಮ್ಮ ಭಾಷಣ ಮುಂದುವರಿಸಿದರು.

ದಚ್ಚುʼ ಫ್ಯಾನ್ಸ್‌ಗೆ ಸಿಎಂ ಕಿವಿಮಾತು
ಇನ್ನೂ ನಿರಂತರವಾಗಿ ʻಡಿ ಬಾಸ್‌, ಡಿಬಾಸ್‌ʼ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಸಿಎಂ ಕಿವಿಮಾತನ್ನೂ ಹೇಳಿದರು. ಇದು ಪವಿತ್ರವಾದ ಸಭೆ, ನಿಮ್ಮ ಅಭಿಮಾನಕ್ಕೆ ಗೌರವ ಕೊಡ್ತೀನಿ. ಆದ್ರೆ ನೀವು ಕೋರ್ಟ್‌ ವಿಚಾರವನ್ನ ತಂದು ನನ್ನ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಭಾವನೆ ನನಗೆ ಗೊತ್ತಿದೆ. ನಾನಿಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಸಿಎಂ ಆಗಿರಬಹುದು, ಆದ್ರೆ ರಾಮನಗರ ಜಿಲ್ಲೆಯ ಮಗ, ಈ ನಿಮ್ಮ ಮಗನನ್ನ ಕಾಪಾಡಿಕೊಳ್ಳುವ ಕೆಲಸವನ್ನ ನೀವು ಮಾಡಬೇಕು ಎಂದರು.

ಮುಂದುವರಿದು. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು, ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳಯದು ಮಾಡ್ತಾಳೆ ಎಂದು ಹೇಳಿದರು.