ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು: ಸರ್ಕಾರದ ನಡೆಗೆ ದ.ಕ ಕಾಂಗ್ರೆಸ್ ವಕ್ತಾರ ವಿನಯ ರಾಜ್ ಕಿಡಿ

ಉಡುಪಿ: ಬಿಜೆಪಿ ಶಾಸಕರು, ಸಂಸದರು ಹಾಗೂ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಡೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ ವಿನಯರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ನಾಯಕರ ಪ್ರಕರಣಗಳನ್ನು ಸರ್ಕಾರ ಕೈಬಿಟ್ಟು ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸದರು ಮತ್ತು ಶಾಸಕರು ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಹಿಂಸಾಚಾರ ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಿಎಸ್ ವೈ ಸರ್ಕಾರ ಅವಕಾಶ ನೀಡುತ್ತಿದೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣವನ್ನು ಹಿಂದೆ ತೆಗದುಕೊಳ್ಳುವುದರಲ್ಲಿ ಬಿ.ಜೆ.ಪಿ ಪ್ರಭಾವಿ ನಾಯಕರುಗಳ ಆಪ್ತರು ಮತ್ತು ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಬಿಜೆಪಿ ಶಾಸಕರ ಆಪ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಒಳಗೊಂಡಿವೆ ಎಂದು ಅವರು ದೂರಿದ್ದಾರೆ.

ಈ ರೀತಿ ಮಾಡುವುದರ ಮೂಲಕ ಅಪರಾಧ ಗಳಿಗೆ ಪ್ರೋತ್ಸಾಹ ನೀಡಿದಂತೆ ಆಗಿದೆ. ಶಾಸನ ರಚಿಸುವವರೆ ಈ ರೀತಿಯಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಹಿಂದೆ ಪಡೆದು ನ್ಯಾಯಾಂಗ ವ್ಯವಸ್ಥೆಗೆ ಬೆಲೆ ಇಲ್ಲದಂತೆ ಮಾಡುವುದು ಖಂಡನೀಯ ಎ.ಸಿ. ವಿನಯ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.