ರಾಡ್‌ನಿಂದ ಹೊಡೆದು ಕೊಲೆ ಯತ್ನ: ಅಪರಾಧಿಗೆ ಜೀವಾವಧಿ ಶಿಕ್ಷೆ

ಕುಂದಾಪುರ: ಕಳೆದ ನಾಲ್ಕು ವರ್ಷದ ಹಿಂದೆ ಕಬ್ಬಿಣಿದ ರಾಡ್‌ನಿಂದ ಹೊಡೆದು ಕೊಲೆಯತ್ನ ನಡೆಸಿದ ಅಪರಾಧಿ ಸತೀಶ್ ಪೂಜಾರಿಗೆ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
೨೦೧೫ ಡಿ.೨೭ರ ರಾತ್ರಿ ಆನಗಳ್ಳಿ ಗ್ರಾಮ ಹೇರಿಕುದ್ರು ನಿವಾಸಿ ಗುರುರಾಜ್ ಪೂಜಾರಿ ಎಂಬವರ ಮೇಲೆ ಸತೀಶ್ ಪೂಜಾರಿ ಹಾಗೂ ರೋಹನ್ ಶೆಟ್ಟಿಗಾರ್ ಎಂಬವರು ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಹಳೆ ದ್ವೇಷದಿಂದ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಅಂದು ಕುಂದಾಪುರ ಠಾಣಾಧಿಕಾರಿಯಾಗಿದ್ದ ನಾಸೀರ್ ಹುಸೇನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇಬ್ಬರು ಆರೋಪಿಗಳಲ್ಲಿ ರೋಹನ್ ಶೇರುಗಾರ್ ಈ ಹಿಂದೆ ಮೃತಪಟ್ಟಿದ್ದರು.
ನ್ಯಾಯಾಲಯದಲ್ಲಿ ೧೫ ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನ್ಯಾಯಾದೀಶ ಪ್ರಕಾಶ್ ಖಂಡೇರಿ ಫೆಬ್ರವರಿ ೧೩ರಂದು ತೀರ್ಪು ಪ್ರಕಟಿಸಿ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ ೨೦ಕ್ಕೆ ಕಾಯ್ದಿರಿಸಿದ್ದರು. ಅಂತೆಯೇ ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.