ಸಹಕಾರಿ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದೆ: ಶಾಸಕ ಲಾಲಾಜಿ ಮೆಂಡನ್

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲು ಸಹಕಾರಿ ರಂಗವೇ ಮುಖ್ಯ ಕಾರಣ. ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಕೊಡುಗೆ ಅಪಾರ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಸೋಮವಾರದಂದು ಪಡುಬಿದ್ರಿ ಮುಖ್ಯರಸ್ತೆಯ ಧನ್ವಂತರಿ ಕೃಪಾ ಅಂಚನ್ ಸಂಕೀರ್ಣದಲ್ಲಿ ಆರಂಭಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 23ನೇ ಪಡುಬಿದ್ರಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತ್ಯಲ್ಪ ಅವಧಿಯಲ್ಲಿ 23 ಶಾಖೆಗಳನ್ನು ಹೊಂದುವ ಮೂಲಕ ಬಲಿಷ್ಠಗೊಂಡ ಸಂಸ್ಥೆಯು ಅತೀ ಶೀಘ್ರವಾಗಿ 100 ಶಾಖೆಗಳನ್ನು ಹೊಂದುವಂತಾಗಲಿ ಎಂದು ಹಾರೈಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಶಮಾನೋತ್ಸವ ಸಂಭ್ರಮದಲ್ಲಿರುವ ಆತ್ಮಶಕ್ತಿ ಸಂಘವು ತನ್ನ 24 ನೇ ಶಾಖೆಯನ್ನು ಗಂಜಿಮಠದಲ್ಲಿ ಮತ್ತು 25 ನೇ ಶಾಖೆಯನ್ನು ಕಾಪುವಿನಲ್ಲಿ ಆರಂಭಿಸಲಿದೆ ಎಂದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸಂಘದ ಭದ್ರತಾ ಕೋಶ ಉದ್ಘಾಟಿಸಿದರು. ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಗಣಕೀಕೃತ ವ್ಯವಸ್ಥೆಗೆ ಮತ್ತು ಆವರ್ತನ ಚಾಲನೆ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಿದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಝ್ ಇ ಮುದ್ರಾ ವ್ಯವಸ್ಥೆಗೆ ಚಾಲನೆ ನೀಡಿದರು. ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರಮಾಕಾಂತ ರಾವ್ ಉಳಿತಾಯ ಯೋಜನೆ ಚಾಲನೆ ನೀಡಿದರು. ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ನಿರಖು ಠೇವಣಿ ಯೋಜನೆಗೆ ಚಾಲನೆ ನೀಡಿದರು. ಪಡುಬಿದ್ರಿ ಅಂಚನ್ ಆಯುರ್ವೇದಿಕ್ ಇಂಡಸ್ಟ್ರೀಸ್ ಮಾಲೀಕ ಡಾ. ಎನ್. ಟಿ. ಅಂಚನ್ ಚಿನ್ನಾಭರಣ ಸಾಲ ಯೋಜನೆಗೆ ಚಾಲನೆ ನೀಡಿದರು.

ಪಲಿಮಾರು ಗ್ರಾಪಂ ಪೂರ್ವಾಧ್ಯಕ್ಷ ಜಿತೇಂದ್ರ ಫುರ್ಟಾಡೋ, ಆತ್ಮಶಕ್ತಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ್ ಎಸ್. ಕೊಂಡಾಣ, ಸೀತಾರಾಮ್ ಎನ್., ರಮಾನಾಥ ಸನಿಲ್, ಚಂದ್ರಹಾಸ ಮರೋಳಿ, ಮುದ್ದು ಮೂಡುಬೆಳ್ಳೆ, ದಿವಾಕರ ಬಿ.ಪಿ., ಗೋಪಾಲ ಎಂ., ಚಂದ್ರಾವತಿ, ಉಮಾವತಿ ಉಪಸ್ಥಿತರಿದ್ದರು.

ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ನಿಖಿಲ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ವಂದಿಸಿದರು.