ಆರ್ಯ – ದ್ರಾವಿಡ ರಾಜಕಾರಣದ ಮುಂದುವರಿದ ಭಾಗ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡನೀಯ ಎಂದ ನಳಿನ್‍ಕುಮಾರ್ ಕಟೀಲ್

ಬೆಂಗಳೂರು : ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿರುವುದು ಖಂಡನೀಯ ಎಂದು ನಳಿನ್‍ಕುಮಾರ್ ಕಟೀಲ್ ಆಕ್ರೋಶ ಹೊರಹಾಕಿದ್ದಾರೆ.ತಮಿಳುನಾಡಿನ ರಾಜಕಾರಣದಲ್ಲಿ ನಿರಂತರವಾಗಿ ಆರ್ಯ – ದ್ರಾವಿಡ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿ ಅದರ ಮೂಲಕ ರಾಜಕಾರಣ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯಾಗಿದ್ದು, ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

ಭಾರತದ ಆತ್ಮ ಹಿಂದುತ್ವ. ಈ ದೇಶದ ಬಹುಸಂಖ್ಯಾತ ಜನರು ಹಿಂದೂಗಳು. ಭಾರತವನ್ನೇ ಹಿಂದೂ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ಇಲ್ಲಿ ಇರುವ ಧರ್ಮ ಒಂದೇ, ಅದು ಹಿಂದೂ ಧರ್ಮ. ಬಾಕಿ ಉಳಿದುದೆಲ್ಲ ಮತಗಳು. ಇಲ್ಲಿನ ಸಂಸ್ಕೃತಿ ಶ್ರೇಷ್ಠವಾದುದು. ಭಾರತದ ಸನಾತನ ಸಂಸ್ಕೃತಿಯನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ರಾಜಕಾರಣಕ್ಕಾಗಿ ಇಂಥ ಹೇಳಿಕೆ ಸರಿಯಲ್ಲ ಎಂದು ನಳಿನ್​ಕುಮಾರ್​ ಕಟೀಲ್​ ಕಿಡಿಕಾರಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸನಾತನ, ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿರುವುದು ಖಂಡನೀಯ. ಡಿಎಂಕೆ ಪಕ್ಷವು ಐಎನ್‍ಡಿಐಎ ಜೊತೆ ಸೇರಿದೆ. ಐಎನ್‍ಡಿಐಎ ಅಂಗ ಪಕ್ಷಗಳು ಇದರ ಕುರಿತು ಏನು ಹೇಳುತ್ತಾರೆಂದು ಸ್ಪಷ್ಟಪಡಿಸಬೇಕು. ಜೊತೆಗೆ ಈ ರಾಜ್ಯದಲ್ಲಿ ಐಎನ್‍ಡಿಐಎ ಪಾಲುದಾರಿಕೆ ಹೊಂದಿದ ಕಾಂಗ್ರೆಸ್ ನಿಲುವೇನು? ಸಮರ್ಥಿಸುತ್ತಾರಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ? ಎಂದು ಕೇಳಿದರು.

ವಿಪಕ್ಷಗಳ ಅಜೆಂಡಾ ಇಂದು ದೇಶದ ಜನರ ಮುಂದೆ ವ್ಯಕ್ತವಾಗಿದೆ. ದೇವಸ್ಥಾನಗಳಿಗೆ ಹೋಗಿ ನಾಮ ಹಾಕಿಕೊಂಡು ಬರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಚಾಳಿಯನ್ನು ಮುಂದುವರೆಸಿದ್ದಾರೆ. ಚುನಾವಣೆ ಬಂದಾಗ ಯಾರು ಕೇಳದಿದ್ದರೂ ನಾನು ಹಿಂದೂ ಎನ್ನುವ ನಾಟಕ ಮಾಡುವುದು. ಚುನಾವಣೆ ನಂತರ ಹಿಂದೂಗಳನ್ನು ಬೈಯುವ ಪ್ರವೃತ್ತಿ ಸಿದ್ದರಾಮಯ್ಯ ಅವರದ್ದು ಎಂದು ಅಶೋಕ್​ ಟೀಕಿಸಿದರು.

ಈ ಹೇಳಿಕೆ ಗಮನಿಸಿದ ಜನತೆ ಮುಂದಿನ ಚುನಾವಣೆಗಳಲ್ಲಿ ಇವರಿಗೆ ಬುದ್ಧಿ ಕಲಿಸುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡುವ ನೈತಿಕ ಅಧಿಕಾರವನ್ನು ಇವರಿಗೆ ಯಾರು ಕೊಟ್ಟಿದ್ದಾರೆ. ಈ ವ್ಯಕ್ತಿಯೂ ಹುಚ್ಚನ ರೀತಿ ಮಾತನಾಡುತ್ತಾರೆ. ಇವನು (ಉದಯನಿಧಿ ಸ್ಟಾಲಿನ್​) ಹಿಂದೂ ಹೌದೇ ಅಲ್ಲವೇ ಎಂದು ಮೊದಲು ಹೇಳಲಿ. ಆಮೇಲೆ ಮಾತನಾಡಲಿ. ‘ಹಿಂದೂಗಳ ಅವಹೇಳನ, ಬೇರೆಯವರ ಓಲೈಕೆ ಮಾಡುವುದು. ಏನು ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ ಇವರು? ಎಂದು ವಾಗ್ದಾಳಿ ನಡೆಸಿದರು.

INDIA ಹಿಡನ್ ಅಜೆಂಡ ಅನಾವರಣ-ಆರ್.ಅಶೋಕ್ : ಉದಯನಿಧಿ ಸ್ಟಾಲಿನ್‍ ತಮ್ಮ ಹೇಳಿಕೆ ಮೂಲಕ ಐಎನ್‍ಡಿಐಎ ಹಿಡನ್ ಅಜೆಂಡಾವನ್ನು ಅನಾವರಣಗೊಳಿಸಿದ್ದಾರೆ. ಹಿಂದೂಗಳನ್ನು ಅವಹೇಳನ ಮಾಡುವುದು ಮತ್ತು ಖಂಡಿಸುವುದೇ ಕಾಂಗ್ರೆಸ್​​​​ನ ಮತ್ತು ‘ಇಂಡಿಯಾ’ ಕೂಟದ ಗುಪ್ತ ಕಾರ್ಯಸೂಚಿ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಟೀಕಿಸಿದರು.