ಮುಂಬೈ: ಎಂಟು ವರ್ಷಗಳ ಹಿಂದೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರಿಗೆ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಅಮರಾವತಿ ಜಿಲ್ಲಾ ನ್ಯಾಯಾಧೀಶ ಮಹತ್ವದ ತೀರ್ಪು ನೀಡಿದೆ.
ಯಶೋಮತಿ ಠಾಕೂರ್ ಕಾಂಗ್ರೆಸ್ ಶಾಸಕಿಯಾಗಿದ್ದು, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್–ಎನ್ಸಿಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರವನ್ನು ಈ ಘಟನೆ ಮುಜುಗರಕ್ಕೀಡುಮಾಡಿದೆ.
ಅಮರಾವತಿ ಜಿಲ್ಲೆಯ ಅಂಬಾದೇವಿ ದೇವಸ್ಥಾನದ ಸಮೀಪ 2012ರ ಮಾರ್ಚ್ 24ರಂದು ಸಂಜೆ 4.15ರ ವೇಳೆಗೆ ಠಾಕೂರ್ ಹಾಗೂ ಅವರ ಬೆಂಬಲಿಗರು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಉಲ್ಲಾಸ್ ರೊರಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿತ್ತು. ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸದಂತೆ ಠಾಕೂರ್ ಅವರಿದ್ದ ಕಾರನ್ನು ಕಾನ್ಸ್ಟೆಬಲ್ ತಡೆದಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಅಮರಾವತಿ ಜಿಲ್ಲಾ ನ್ಯಾಯಾಧೀಶರಾದ ಉರ್ಮಿಳಾ ಜೋಶಿ ಅವರು ಠಾಕೂರ್ ಸೇರಿದಂತೆ ಅವರ ಚಾಲಕ ಸಾಗರ್ ಸುರೇಶ್ ಖಂಡೇಕರ್ ಹಾಗೂ ಬೆಂಬಲಿಗರಾದ ಶರದ್ ಕಾಶಿರಾವ್ ಜವಾನ್ಲಾಲ್ ಹಾಗೂ ರಾಜು ಕಿಸಾನ್ ಇನ್ಗಲ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ, ತಲಾ ₹15 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.












