ಮರಗಳ ತೆರವು: ಸಾರ್ವಜನಿಕ ಅಹವಾಲು ಸಭೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ‌

ಉಡುಪಿ: ಕುಂದಾಪುರ ತಾಲೂಕು ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಕಿ.ಮೀ 312.40 ರಿಂದ 335.00 ರ ವರೆಗೆ (ಮಡಾಮಕ್ಕಿಯಿಂದ ಹಾಲಾಡಿವರೆಗೆ) ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗಿರುವ ವಿವಿಧ ಜಾತಿಯ 181 ಮರಗಳನ್ನು ಹಾಗೂ ಬ್ರಹ್ಮಾವರ ತಾಲೂಕು ಆವರ್ಸೆ ಹಾಗೂ ಹಿಲಿಯಾಣ ಗ್ರಾಮದ ಕೋಟ-ಗೋಳಿಯಂಗಡಿ ರಸ್ತೆಯ ಪಕ್ಕದಲ್ಲಿರುವ ಒಣಗಿದ, ರಸ್ತೆ ತಿರುವುಗಳಲ್ಲಿ ರಸ್ತೆ ವಿಸ್ತರಣೆಗೆ ಅಡಚಣೆಯಾದ ಹಾಗೂ ತೀರಾ ರಸ್ತೆಗೆ ಬಾಗಿದ ಒಟ್ಟು 73 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

ಸದ್ರಿ ಸ್ಥಳದಲ್ಲಿರುವ ಮರಗಳು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಕಾಯ್ದೆಯ ಪ್ರಕಾರ 50 ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಜನವರಿ 11 ರಂದು ಮಧ್ಯಾಹ್ನ 3 ಗಂಟೆಗೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆ ಸಲ್ಲಿಸಬಹುದು ಅಥವಾ ಸದ್ರಿ ದಿನಾಂಕದ ಒಳಗಾಗಿ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ kpurforest@yahoo.com ನಲ್ಲಿಯೂ ಸಹ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.