ಚುನಾವಣಾ ಆಯೋಗದ ಮಾರ್ಗಸೂಚಿ ಪಾಲಿಸಿ: ಕೃಷ್ಣ ಕುನಾಲ್

ಉಡುಪಿ, ಮೇ 19: ಮೇ 23 ರಂದು ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ , ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು , ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ವೀಕ್ಷಕರಾದ ಕೃಷ್ಣ ಕುನಾಲ್ ಸೂಚಿಸಿದ್ದಾರೆ.
ಅವರು ಭಾನುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಣಿಕೆ ಸಹಾಯಕರು, ಎಣಿಕೆ ಮೇಲ್ವಿಚಾರಕರು ಮತ್ತು ಮೃಕ್ರೋ ಅಬ್‍ಸರ್ವರ್ ಗಳಿಗೆ ನಡೆದ 2 ನೇ ಹಂತದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತ ಎಣಿಕೆ ಕಾರ್ಯದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಿ, ನೀವು ನೀಡುವ ಎಣಿಕೆ ಕಾರ್ಯದ ಫಲಿತಾಂಶವು, ಮರು ಮತ ಎಣಿಕೆಗೆ ಅವಕಾಶ ನೀಡದಂತಿರಬೇಕು, ಅಂಚೆ ಮತ ಪತ್ರಗಳ ಎಣಿಕೆಯಲ್ಲಿ ಹೆಚ್ಚಿನ ಜಾಗೃತಿ ವಹಿಸುವಂತೆ ಮತ್ತು ಅವುಗಳನ್ನು ಚಲಾಯಿಸುವಾಗ ಎಲ್ಲಾ ಅಗತ್ಯ ದಾಖಲೆಗಳು ಇದೆಯೇ, ಘೋಷಣಾ ಪತ್ರದಲ್ಲಿ ಮತದಾರರ ಸಹಿ ಆಗಿದೆಯೇ, ಎಂಬುದನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಎಣಿಕೆ ಮಾಡಿ, ಅಂಚೆ ಮತಗಳು ಪತ್ರ ತಿರಸ್ಕøತವಾದರೆ ಸೂಕ್ತ ಕಾರಣಗಳನ್ನು ನಮೂದಿಸಿ ಎಂದು ಕೃಷ್ಣ ಕುನಾಲ್ ಹೇಳಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಸೀಲ್ದಾರ್ ಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.