ಬೈಂದೂರು: ಓಮ್ನಿ ಕಾರನ್ನು ಬೆನ್ನಟ್ಟಲು ಹೋದ ಪೊಲೀಸ್ ಜೀಪ್ ಪಲ್ಟಿ

ಬೈಂದೂರು: ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಓಮ್ಮಿ ಕಾರನ್ನು ಬೆನ್ನಟ್ಟಲು ಹೋಗಿ ಪೊಲೀಸ್ ಜೀಪೊಂದು ಪಲ್ಟಿಯಾದ ಘಟನೆ ಬೈಂದೂರಿನ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಪೊಲೀಸ್ ಜೀಪ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವೃತ್ತ ನಿರೀಕ್ಷಕ ಹಾಗೂ ಜೀಪ್ ಚಾಲಕ ಗಾಯಗೊಂಡಿದ್ದಾರೆ.

ಬೈಂದೂರಿನಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಮಾರುತಿ ಓಮ್ನಿ ಕಾರೊಂದು ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಇದೇ ವೇಳೆ ಗಸ್ತಿನಲ್ಲಿದ್ದ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಹಾಗೂ ಅವರ ಚಾಲಕ ಹೇಮರಾಜ್ ಅವರು ರೌಂಡ್ಸ್ ಗೆ ಬಂದಿದ್ದು, ಕಾರನ್ನು ಗಮನಿಸಿ ಹಿಂಬಾಲಿಸಿಕೊಂಡು ಹೋಗಿದ್ದಾರೆ.

ಓಮ್ನಿ ಕಾರಿನವರು ಪೊಲೀಸರನ್ನು ಕಂಡ ಕೂಡಲೇ ತಪ್ಪಿಸಿಕೊಂಡು ಹೋಗಿದ್ದಾರೆ. ಸುರೇಶ್ ನಾಯ್ಕ್ ಕಾರನ್ನು ಬೆನ್ನಟ್ಟುವಂತೆ ಚಾಲಕನಿಗೆ ಸೂಚಿಸಿದ್ದು, ಅದರಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಒತ್ತಿನೆಣೆ ಕಡೆಗೆ ವೇಗವಾಗಿ ಚಲಿಸಿದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ವೇಗವಾಗಿ ಚಲಿಸುವ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್ ಪಲ್ಟಿಯಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಜಿ ನಾಯ್ಕ್ ಮತ್ತು ಜೀಪ್ ಚಾಲಕ ಹೇಮರಾಜ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಓಮ್ನಿ ಕಾರನ್ನು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.