ಬ್ರಹ್ಮಾವರದಲ್ಲಿ ಶಿಕ್ಷಕರ ಸಹಕಾರಿ ಸಂಘದ ನವೀಕೃತ ಶಾಖಾ ಕಚೇರಿ ಶುಭಾರಂಭ

ಉಡುಪಿ, ಜುಲೈ 8: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಇದರ ಶಾಖೆಯು ಬ್ರಹ್ಮಾವರದ ಸೈಂಟ್ ಅಂತೋನಿ ಪ್ರೆಸ್ ಪಾಯಿಂಟ್‍ನ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದು, ಈ ಶಾಖೆಯ ಸಂಘದ ಅಧ್ಯಕ್ಷರಾದ ಸಿ. ಪ್ರಭಾಕರ ಶೆಟ್ಟಿಯವರ ನೇತೃತ್ವದಲ್ಲಿ ನೂತನ ವಿನ್ಯಾಸದೊಂದಿಗೆ ನವೀಕರಣಗೊಂಡು ಜೂನ್ 16 ರಂದು ಶುಭಾರಂಭಗೊಂಡಿರುತ್ತದೆ.

ಶಾಖೆಯಲ್ಲಿ 528 ಸದಸ್ಯರಿದ್ದು, ಸಂಘದಲ್ಲಿ ಒಟ್ಟು 4146 ಸದಸ್ಯರಿದ್ದಾರೆ. ಸಂಘದ ಒಟ್ಟು ವ್ಯವಹಾರ ಸುಮಾರು 65 ಕೋಟಿ ರೂ. ಆಗಿರುತ್ತದೆ. ಇದೀಗ ನವೀಕರಣಗೊಂಡಿರುವ ಸಂಘದ ಶಾಖಾ ಕಚೇರಿಯಲ್ಲಿ ಜಿಲ್ಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಬಂಧುಗಳು ಸದಸ್ಯರಾಗಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ನವೀಕೃತ ಶಾಖೆಯ ಶುಭಾರಂಭದಂದು ನವೀಕರಣ ಕಾರ್ಯದ ಗುತ್ತಿಗೆದಾರರ ಹಾಗೂ ವಿನ್ಯಾಸ ಕಾರರಾದ ದಯಾ ವಿಕ್ಟರ್ ಲೋಬೋ(ಆಕಾರ್ ಕ್ರಿಯೇಶನ್), ಹಾಗೂ ಸಂಘದ ಈ ಶಾಖೆಯು ತೆರೆಯಲ್ಪಡುವುದಕ್ಕೆ ಸರ್ವ ವಿಧಗಳಲ್ಲಿ ಸೇವೆ ಮತ್ತು ಸಹಕಾರವನ್ನು ನೀಡಿದ ಕಟ್ಟಡದ ಹಿಂದಿನ ಮಾಲಕರಾದ ಗಿಲ್ಬರ್ಟ್ ಡಿಸಿಲ್ಪ ಅವರನ್ನು ಸನ್ಮಾನಿಸಲಾಯಿತು.
ನವೀಕೃತ ಶಾಖೆಯ ಶುಭಾರಂಭ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಸಲಹಾ ಮಂಡಳಿಯ ಸದಸ್ಯರು, ಆಹ್ವಾನಿತರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.