ಬ್ರಹ್ಮಾವರ: ಶೆಟರ್ ಮುರಿದು ₹1.40 ಲಕ್ಷ ಮೌಲ್ಯದ ಗೇರುಬೀಜ ಕಳವು

ಬ್ರಹ್ಮಾವರ: ತಾಲ್ಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಕಿನ್‌ಜೆಡ್ಡುವಿನ ವಿಜಯದುರ್ಗಾ ಗೇರುಬೀಜ ಕಾರ್ಖಾನೆಯಲ್ಲಿ 1.40 ಲಕ್ಷ ಮೌಲ್ಯದ ತಲಾ 10 ಕೆ.ಜಿ. ತೂಕದ 32 ಗೇರುಬೀಜ ಡಬ್ಬಗಳನ್ನು ಕಳವು ಮಾಡಲಾಗಿದೆ.

ನವರಾತ್ರಿಯ ಹಿನ್ನೆಲೆಯಲ್ಲಿ ಅ.21ರಿಂದ 26ರ ವರೆಗೆ ಕಾರ್ಖಾನೆಯ ಕೆಲಸದವರಿಗೆ ರಜೆ ನೀಡಲಾಗಿತ್ತು. ಆದ್ದರಿಂದ ಗೇರುಬೀಜಗಳನ್ನು ಸಂಸ್ಕರಿಸಿ ತಲಾ 10 ಕೆಜಿ ತೂಗುವ ಡಬ್ಬಗಳಲ್ಲಿ ತುಂಬಿಸಿ ಸ್ಟಾಕ್ ರೂಮ್‌ನಲ್ಲಿ ಸಂಗ್ರಹಿಸಿ ಇಡಲಾಗಿತ್ತು.

ಅ. 27ರಂದು ಬೆಳಿಗ್ಗೆ 7.30ಕ್ಕೆ ಕಾರ್ಖಾನೆಯ ಮಾಲೀಕ ರಾಮಕೃಷ್ಣ ಶಾನುಭಾಗ್ ಅವರು ಕಾರ್ಖಾನೆಯ ಬೀಗವನ್ನು ತೆರೆದು ಒಳಗೆ ಹೋಗಿ ಪರಿಶೀಲಿಸಿದಾಗ ಯಾರೋ ಕಳ್ಳರು ಕಾರ್ಖಾನೆಯ ಶೆಟರ್ ನ್ನು ಮೀಟಿ ತೆರೆದು ಒಳಗೆ ನುಗ್ಗಿ ₹ 1.40 ಲಕ್ಷ ಮೌಲ್ಯದ 32 ಗೇರುಬೀಜ ಡಬ್ಬಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಮಾಲೀಕರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.