ಪ್ರಧಾನಿ ಮೋದಿ ಜನ್ಮದಿನದಿಂದ ಮಹಾತ್ಮಾ ಗಾಂಧಿ ಜನ್ಮದಿನದವರೆಗೆ ಬಿಜೆಪಿ ಸೇವಾ ಪಾಕ್ಷಿಕ ಅಭಿಯಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ಕೇಂದ್ರ ಸರಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ಸರಕಾರದ ಅನೇಕ ಜನಪರ ಯೋಜನೆಗಳನ್ನು ಸ್ವೀಕರಿಸಿ ಫಲಾನುಭವಿಗಳಾಗುವ ಮೂಲಕ ದೇಶವಾಸಿಗಳು ಇದನ್ನು ಅನುಮೋದಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಹೇಳಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಸೆ.25 ರಂದು ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್‌ ಉಪಾಧ್ಯಾಯರವರ ಜನ್ಮದಿನ, ಅ.2 ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಸೂಚನೆಯಂತೆ ರಾಜ್ಯ ಬಿಜೆಪಿ ಮಾರ್ಗದರ್ಶನದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್ ರವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೆ.17 ರಿಂದ ಅ.2ರ ವರೆಗೆ ಜಿಲ್ಲೆಯಾದ್ಯಂತ ವ್ಯಕ್ತಿತ್ವ ಪೂರ್ಣ ಸೇವಾ ಚಟುವಟಿಕೆಗಳೊಂದಿಗೆ ಸೇವಾ ಪಾಕ್ಷಿಕ ಅಭಿಯಾನವನ್ನು ಆಚರಿಸಲಿದ್ದಾರೆ ಎಂದರು.

ಅಭಿಯಾನದ ಪ್ರಮುಖ 13 ಸೇವಾ ಕಾರ್ಯಗಳು :

ಸೆಪ್ಟಂಬರ್ 17-18: ರಕ್ತದಾನ ಶಿಬಿರ

ಸೆಪ್ಟೆಂಬರ್ 17- ಅಕ್ಟೋಬರ್ 2: ಜೀವ ರಕ್ಷಕ ಲಸಿಕಾ ಅಭಿಯಾನ

ಸೆ – 20: ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ

ಸೆಪ್ಟಂಬರ್ 20 -21: ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಪ್ರದರ್ಶಿನಿ

ಸೆಪ್ಟಂಬರ್ 21- 22: ಆರೋಗ್ಯ ತಪಾಸಣಾ ಶಿಬಿರ

ಸೆ.22-23: ಅರಳಿ ಮರ ನೆಡುವ ಅಭಿಯಾನ

ಸೆ. 24 -25: ಕಮಲೋತ್ಸವ (ಪಂಡಿತ್ ದೀನದಯಾಳ್‌ಉಪಾಧ್ಯಾಯ ಜಯಂತಿ)

ಸೆಪ್ಟಂಬರ 26 – 27: ಅಮೃತ ಸರೋವರ ನಿರ್ಮಾಣ

ಸೆಪ್ಟಂಬರ್ 28-29: ಅಂಗನವಾಡಿ ಸೇವಾ ದಿವಸ್

ಸೆಪ್ಟೆಂಬರ್ 30 ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ, ಕ್ಷಯರೋಗ ನಿರ್ಮೂಲನಾ ಅಭಿಯಾನ

ಅಕ್ಟೋಬರ್ 2: ಸ್ವಚ್ಛತಾ ಅಭಿಯಾನ, ಖಾದಿ ಉತ್ಸವ (ಗಾಂಧಿ ಜಯಂತಿ)

ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಸಹ ಸಂಚಾಲಕರಾಗಿ ಸದಾನಂದ ಉಪ್ಪಿನಕುದ್ರು ಮತ್ತು ಶಿವಕುಮಾರ್ ಅಂಬಲಪಾಡಿ ನೇಮಕಗೊಂಡಿದ್ದು, ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರು ಮತ್ತು ಅಭಿಯಾನದ 13 ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಿಸಲಾಗಿದೆ. ಈ ತಂಡವು ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದ ವರೆಗೆ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನದ ವ್ಯವಸ್ಥಿತ ಸಂಯೋಜನೆ ಹಾಗೂ ವರದಿ ಸಲ್ಲಿಕೆಯ ಬಗ್ಗೆ ನಿಗಾ ವಹಿಸಲಿದೆ ಎಂದು ಅವರು ತಿಳಿಸಿದರು.