ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಸಿಡಿ ಭೀತಿ?: ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ

ಬೆಂಗಳೂರು: ಸಚಿವ ಸ್ಥಾನದ ಪ್ರಬಲ‌ ಆಕಾಂಕ್ಷಿಯಾಗಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಇದೀಗ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಯಾವುದೇ ಸಿಡಿ ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನನ್ನನ್ನು ಯಾರೂ ಸಹ ಬ್ಲ್ಯಾಕ್​​ಮೇಲ್ ಮಾಡಲು ಸಾಧ್ಯವಿಲ್ಲ. ನಾನೂ ಬ್ಲ್ಯಾಕ್​​ಮೇಲ್ ಖೆಡ್ಡಾಗೆ ಬೀಳಲ್ಲ. ಆದರೆ, ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾನೆ. ಹೀಗಾಗಿ ನಾನು ತಡೆಯಾಜ್ಞೆ ತಂದಿದ್ದೇನೆ ಎಂದರು.

ಈಗ ಯಾವುದನ್ನು ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕೂ ಜೋಡಿಸಬಹುದು. ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ಆದ್ದರಿಂದ ಈ ತಡೆಯಾಜ್ಞೆ ತಂದಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.