ಭಾರತೀಯ ಸೇನೆಯಿಂದ ಉಗ್ರರ ತಾಣ ನಾಶ, ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಉಡುಪಿ: ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಮಂಗಳವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ಯಾಮಲ ಕುಂದರ್‌ ಮಾತನಾಡಿ, ಉಗ್ರರ ತಾಣಗಳನ್ನು
ಧ್ವಂಸ ಮಾಡುವ ಮೂಲಕ ಭಾರತ ಸಾಮರ್ಥ್ಯ ಏನೆಂಬುವುದನ್ನು ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತೋರಿಸಿಕೊಟ್ಟಿದ್ದಾರೆ. ಇನ್ನಾದರೂ ಪಾಕಿಸ್ತಾನ ಉಗ್ರರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನ ಸಂಪೂರ್ಣ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ  ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ತಲೆ ಹಾಕಿದರೆ, ಅದರ ನೆಲದಲ್ಲಿ ಸೂಕ್ತ ಉತ್ತರ ಕೊಡುವ ಸಾಮರ್ಥ್ಯ ದೇಶಕ್ಕಿದೆ. ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳನ್ನು ಸಂಪೂರ್ಣ ದಮನ ಮಾಡಬೇಕು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಇಡೀ ದೇಶವೇ ಒಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್‌, ಬಿಜೆಪಿ ಮುಖಂಡರಾದ ರಾಘವೇಂದ್ರ ಕಿಣಿ, ಜಗದೀಶ್‌ ಆಚಾರ್ಯ, ಟಿ.ಜಿ. ಹೆಗ್ಡೆ, ಭಾರತಿ ಪ್ರಶಾಂತ್‌, ಸವಿತಾ ಹರೀಶ್‌ ರಾಮ್‌, ಗೀತಾ ಶೇಟ್‌, ಸಂತೋಷ್‌ ಕುಮಾರ್‌, ಹರೀಶ್‌ ಪೂಜಾರಿ, ದಿನೇಶ್‌ ಅಮೀನ್‌, ದೀಪಕ್‌ ಶೇಟ್‌, ಪ್ರವೀಣ್‌ ಪೂಜಾರಿ, ರೋಷನ್‌ ಶೆಟ್ಟಿ, ಚಂದ್ರಶೇಖರ್‌ ಪ್ರಭು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.