ಹಿರಿಯಡಕ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

ಹಿರಿಯಡಕ: ಅಜೆಕಾರಿನಿಂದ ಉಡುಪಿಗೆ ಹೋಗುತ್ತಿದ್ದ ಎಸ್ ವಿಟಿ ಖಾಸಗಿ ಬಸ್ ಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರೆ ಗಾಯಗೊಂಡ ಘಟನೆ ಹಿರಿಯಡಕ ಸಮೀಪದ ಪುತ್ತಿಗೆ ರಾಷ್ಟ್ರೀಯ ಹೆದ್ದಾರಿ 169ಎ ಇಳಿಜಾರು ರಸ್ತೆಯಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.

ಮೃತ ಬೈಕ್ ಸವಾರನನ್ನು ಶರಣ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹಸವಾರೆಯನ್ನು ಉಷಾ ಎಂದು ಗುರುತಿಸಲಾಗಿದೆ. ಬಸ್ ಅಜೆಕಾರಿನಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಉಡುಪಿ ಕಡೆಗೆ ಹೊರಟಿದ್ದು, ಈ ವೇಳೆ ಪುತ್ತಿಗೆ ಸಮೀಪ ಬರುವಾಗ ಹಿರಿಯಡಕ ಕಡೆಯಿಂದ ಪೆರ್ಡೂರು ಕಡೆಗೆ ಬೈಕ್ ನಲ್ಲಿ‌ ಉಷಾ ಎಂಬವರನ್ನು ಕುರಿಸಿಕೊಂಡು ಹೋಗುತ್ತಿದ್ದ ಶರಣ್ ಎನ್ನುವವರು ಎದುರಿನಿಂದ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಬಸ್ ಗೆ ಹೊಡೆದಿದ್ದಾರೆ.

ಇದರ ಪರಿಣಾಮ ಬೈಕ್ ಸಮೇತ ಇಬ್ಬರು ರಸ್ತೆಗೆ ಬಿದ್ದಿದ್ದು, ಶರಣ್ ಗೆ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಹಿಂಬದಿ ಸವಾರರಿಗೆ ಕೂಡ ಗಾಯವಾಗಿದೆ. ಇಬ್ಬರೂ ಕೂಡ ಮಾತನಾಡುತ್ತಿರಲಿಲ್ಲ. ಇಬ್ಬರನ್ನು ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದು, ಈ ವೇಳೆ ಶರಣ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದು, ಸಹ ಸವಾರೆ ಉಷಾ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.