ಸ್ತ್ರೀ-ಪುರುಷರೆಂಬ ತಾರತಮ್ಯವಿಲ್ಲದೆ ಸರ್ವಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ಬಸವಣ್ಣ: ಪ್ರಸನ್ನ ಹೆಚ್

ಉಡುಪಿ: ಜಗತ್ತಿನಲ್ಲಿ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ರಚಿಸುವ ಮೂಲಕ ಸರ್ವಜನಾಂಗದ ಶ್ರೇಯೋಭಿವೃದ್ಧಿಗೆ ಸ್ತ್ರೀ-ಪುರುಷರೆಂಬ ತಾರತಮ್ಯವಿಲ್ಲದೆ ಮುಕ್ತ ವಾತಾವರಣವನ್ನು ಕಲ್ಪಿಸಿದ ಬಸವಣ್ಣನವರು ಜಗತ್ತಿನ ಪ್ರಥಮ ಪ್ರಜಾಪ್ರಭುತ್ವಕ್ಕೆ ಮಾದರಿಯಾದವರು ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು.

ಅವರು ಭಾನುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ತಾವು ಈ ಹಿಂದೆ ಬಸವಕಲ್ಯಾಣದಲ್ಲಿ ಕೆಲಸ ನಿರ್ವಹಿಸಲು ಸಿಕ್ಕ ಅವಕಾಶವನ್ನು ಸ್ಮರಿಸಿಕೊಂಡು, ಬಸವಕಲ್ಯಾಣದಲ್ಲಿ ಇರುವ ಬಸವಣ್ಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರದ ವತಿಯಿಂದ ಬಸವಣ್ಣನವರನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೆಂದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ರವರು ಮಾತನಾಡುತ್ತಾ ಬಸವಣ್ಣನವರ ಕಾಯಕ ತತ್ವ ಹಾಗೂ ದಾಸೋಹ ತತ್ವ ಇಂದಿನ ಮಟ್ಟಿಗೆ ತುಂಬಾ ಪ್ರಸ್ತುತ. ಬಸವಣ್ಣನವರ ತತ್ವದಂತೆ ಅಂತರಂಗ ಶುದ್ಧರಾಗಿ ಎಲ್ಲರೂ ಕೆಲಸ ನಿರ್ವಹಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಂದ್ರ ಅಡಿಗ ಅವರು ಶುಭ ಹಾರೈಕೆ ಮಾತುಗಳನ್ನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗಿರೀಶ್, ಬಸವಣ್ಣನವರ ವಚನವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ರವಿರಾಜ್, ನರಸಿಂಹಮೂರ್ತಿ, ರಾಜೇಶ್ ಭಟ್, ಸಂಗೊಳ್ಳಿ ರಾಯಣ್ಣ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸವಯ್ಯ ಸ್ವಾಮಿ ಚಿಕ್ಕಮಠ
ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಬಸವ ಸಮಿತಿ ಜಿಲ್ಲಾ ಅಧ್ಯಕ್ಷ ಶಾಂತೇಗೌಡ ರವರು ವಂದಿಸಿದರು.