ಕೋಟೆಯ ಊರಲ್ಲಿ ಕೋಟಿ ನೆನಪುಗಳ ಗತ ವೈಭವ : ಜ.25 ಬಾರಕೂರಿನಲ್ಲಿ ಆಳುಪೋತ್ಸವ

ಉಡುಪಿ ಜಿಲ್ಲೆಯ ಸೀತಾನದಿಯು ಹಾದು ಹೋಗುವ ಈ ಊರು ಬಾರಕೂರು. ಐತಿಹಾಸಿಕ ಪುರಾತನ ದೇವಾಲಯಗಳ, ಕೋಟೆ, ಅರಮನೆಗಳ ಬೀಡು ಎಂದು ಪ್ರಸಿದ್ದಿ ಪಡೆದಿದೆ  . ಅಳುಪಾ ರಾಜರ ರಾಜಧಾನಿ ಆಗಿದ್ದ ಬಾರಕೂರು, ತುಳುನಾಡಿನ ರಾಜಧಾನಿ ಎಂದೂ ಕರೆಯಲಾಗುತ್ತದೆ. ಪುರಾತತ್ವ ಇಲಾಖೆಯ ಸಂಶೋಧನಾ ಕಾರ್ಯದ ವೇಳೆ ಪತ್ತೆಯಾದ ತುಳು ಭಾಷೆಯ ಶಾಸನಗಳೇ ಇದಕ್ಕೆ ಬಲವಾದ ಸಾಕ್ಷಿ. ವಿಜಯನಗರದ ಅರಸರು ಹಾಗೂ ಅಳುಪಾ ಅರಸರು ನಿರ್ಮಿಸಿದ ಕೋಟೆಗಳ ಅವಶೇಷಗಳನ್ನು ಇಲ್ಲಿ ಕಾಣಬಹುದು.
ಅತ್ಯಾಧುನಿಕ ತಂತ್ರಜ್ಞಾನ ಬಳಸದೇ ಅಂದಿನ ಕಾಲದ ಕಲೆ ಮತ್ತು ಕೌಶಲಗಳನ್ನು ಪರಿಣಾಮಕಾರಿಯಾಗಿ ಮಿಶ್ರಣ ಮಾಡಿದ ಜ್ವಲಂತ ಉದಾಹರಣೆಯೆಂದರೆ ಅಳುಪಾ ಅರಸರು 8 ನೇ ಶತಮಾನದಿಂದ 12 ನೇ ಶತಮಾನದ ಒಳಗೆ ನಿರ್ಮಿಸಿದ ಈ ಐತಿಹಾಸಿಕ ಕತ್ತಲೆ ಬಸದಿ. ಬಸದಿಯ ಪ್ರವೇಶದ್ವಾರದಲ್ಲಿ 20 ಅಡಿ ಎತ್ತರದ ಏಕಶಿಲಾ ಸ್ತಂಭ ಇದೆ. ಅತ್ಯಾಕರ್ಷಕ ಕೆತ್ತನೆಗಳು ಕಲ್ಲಿನ ಮೇಲೆ ಮೂಡಿ ಬಂದಿದೆ. ಹಲವಾರು ಕಲಾಕೃತಿಗಳ ಜೊತೆಗೆ ಲಾಂಛನವನ್ನು ಕೂಡ ಒಳಗೊಂಡಿರುವ ಈ ಸ್ತಂಭ ಅಂದಿನಿಂದ ಇಂದಿನವರೆಗೂ ಅಚಲವಾಗಿ ನಿಂತಿದೆ.
ಈ ಬಸದಿಯ ಗರ್ಭ ಗುಡಿಯ ಸುತ್ತಲೂ ಹಾಗೂ ಮೇಲ್ಭಾಗದಲ್ಲಿ ಕಲ್ಲಿನ ಕಂಬಗಳಿವೆ. ಭಗವಾನ್ ಮಹಾವೀರ ವಿಗ್ರಹ ಶಿಥಿಲವಾಗಿರುವ ಕಾರಣ ಅದರ ಜಾಗದಲ್ಲಿ ಕಲ್ಲಿನ ಸಣ್ಣಪುಟ್ಟ ತುಂಡುಗಳನ್ನು ಜೋಡಿಸಿ ಇಡಲಾಗಿದೆ. ಈ ಬಸದಿಯು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಸದಿಯಲ್ಲಿ ಜೈನ ತೀರ್ಥಂಕರರ ಮೂರ್ತಿಗಳ ಜೊತೆಗೆ ಶಿವ, ವಿಷ್ಣು, ನಾಗಕಾಳಿ ಗುಡಿಗಳಿವೆ.

ಜ.25ರಿಂದ 27ರ ವರಗೆ ಆಳುಪ ಉತ್ಸವ

ಸುಮಾರು 1,400 ವರ್ಷಗಳಷ್ಟು ದೀರ್ಘ‌ ಕಾಲ ಅಳುಪ ವಂಶಸ್ಥರು ಆಳ್ವಿಕೆ ನಡೆಸಿದ್ದರು. ದಕ್ಷಿಣ ಭಾರತದಲ್ಲೇ ಪ್ರಭುದ್ಧವಾದ ಪುರಾತನ ನಾಗರೀಕತೆ ತಂದವರು.ಆಳುಪರು, ಪಾಂಡ್ಯರು, ವಿಜಯನಗರದ ಕಾಲದಲ್ಲಿ ವೈಭವದಿಂದ ಮೆರೆದ ಊರು ಬಾರಕೂರು. ಪ್ರತಿನಿತ್ಯ ಉತ್ಸವ ನಡೆಯಲಿ ಎನ್ನುವ ಉದ್ದೇಶದಿಂದ ಇಲ್ಲಿ 365 ದೇವಸ್ಥಾನಗಳು ನಿರ್ಮಾಣಗೊಂಡಿತ್ತು. ತುಳುನಾಡಿನ ರಾಜಧಾನಿಯಾಗಿ, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬಾರಕೂರು ಗುರುತಿ ಸಿಕೊಂಡಿತ್ತು. ಐತಿಹಾಸಿಕ ಸ್ಥಳವಾದ ಬಾರಕೂರು ಸಂರಕ್ಷಿಸುವ ಜತೆಗೆ ಇತಿಹಾಸವನ್ನು ನೆನಪಿಸುವ ದೃಷ್ಟಿಯಿಂದ ಅಳುಪ ಉತ್ಸವ ಆಯೋಜಿಸಲಾಗಿದೆ.

ಇದೀಗ ಆಳುಪ ಉತ್ಸವ ಪ್ರಯುಕ್ತ ಐತಿಹಾಸಿಕ ಬಾರಕೂರು ಕೋಟೆ ಸಿದ್ಧಗೊಳ್ಳುತ್ತಿದೆ . ಈ ಸಂದರ್ಭ ಗತಕಾಲದ ವೈಭವವನ್ನು ನೆನಪಿಸುವ ಹಲವು ವಸ್ತುಗಳು ದೊರೆಯುತ್ತಿವೆ. ರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳು, ಶಾಸನ, ಶಿಲಾ ವಿಗ್ರಹಗಳು ಪತ್ತೆಯಾಗಿವೆ. ಆಳುಪರು, ಹೊಯ್ಸಳರು, ವಿಜಯನಗರ, ಕೆಳದಿ ಅರಸರು ಬಾರಕೂರನ್ನು ಆಳಿದ್ದರು ಎಂದು ಇತಿಹಾಸ ಹೇಳುತ್ತದೆ.  ಇಂತಹ ಐತಿಹಾಸಿಕ, ಪಾರಂಪರಿಕ ನಗರಿ ಬಾರಕೂರಿನಲ್ಲಿ ಜ.25ರಿಂದ 27ರ ವರಗೆ ಆಳುಪ ಉತ್ಸವ ಜರಗಲಿದೆ.

ಆಳುಪೋ ತ್ಸವ ವೈಶಿಷ್ಟತೆ 

ಆಳುಪರು ಮತ್ತು ಬಾರಕೂರಿನ ವಿಚಾರ ಸಂಕಿರಣ, ತೋಟಗಾರಿಕಾ ಇಲಾಖೆ ಆಯೋಜನೆಯಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮಳಿಗೆ, ಆಕರ್ಷಕ ವಿದ್ಯುತ್‌ ಅಲಂಕಾರಗಳನ್ನು ಒಳಗೊಂಡಿರಲಿದೆ. ಬೂತಾಳ ಪಾಂಡ್ಯ ವೇದಿಕೆಯಲ್ಲಿ ತುಳು ನಾಡ ಇತಿಹಾಸವನ್ನು ಮೆಲುಕು ಹಾಕುವ ಕಥಾನಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.ಪ್ರವಾಸೋದ್ಯಮ ಇಲಾಖೆಯಿಂದ ಹೆರಿಟೇಜ್‌ ವಾಕ್‌(ಪಾರಂಪರಿಕ ನಡಿಗೆ) ವಿಶಿಷ್ಟ ಯೋಜನೆ ಜಾರಿಯಾಗುತ್ತಿದೆ. ಪ್ರಮುಖ 17 ಕೇಂದ್ರಗಳನ್ನು ಗುರುತಿಸಿ ಪ್ರವಾಸಿಗರಿಗೆ ಅಲ್ಲಿನ ಸಂಪೂರ್ಣ ಮಾಹಿತಿ ಒದಗಿಸುವ ಆ್ಯಪ್‌ ಸಿದ್ಧಗೊಳ್ಳುತ್ತಿದೆ. ಐತಿಹಾಸಿಕ ಸಿಂಹಾಸನ ಗುಡ್ಡೆಯಿಂದ ಪ್ರಾರಂಭಗೊಂಡು ಕಲ್ಚಪ್ರತನಕ ವಿವಿಧ ಸ್ಥಳಗಳನ್ನು ಆಯ್ದುಕೊಳ್ಳಲಾಗಿದೆ.