ಮಂಚಿಯ ಕಳ್ಳ ದಂಪತಿ ಬಂಧನ: 4 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮನೆ, ದೇವಸ್ಥಾನ ಸೇರಿದಂತೆ ಇತರೆ ವಾಣಿಜ್ಯ ಕೇಂದ್ರಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ 62 ಗ್ರಾಂ ಚಿನ್ನದ ಆಭರಣ, ಎರಡೂವರೆ ಕಿ.ಗ್ರಾಂ. ಬೆಳ್ಳಿ ವಸ್ತು ಮತ್ತು ಇತರ ವಸ್ತುಸೇರಿ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜೇಶ್ ನಾಯಕ್ ಅಲಿಯಾಸ್ ರಾಜು ಪಮುದಿ (42) ಹಾಗೂ ಪದ್ಮಾ ಪಮುದಿ (37) ಗುರುತಿಸಲಾಗಿದೆ. ಈ ಇಬ್ಬರು ದಂಪತಿಗಳಾಗಿದ್ದು, ಮಣಿಪಾಲ, ಮಂಚಿ, ಉಡುಪಿ, ಮಂಗಳೂರಿನ ಕೆಲವು ಕಡೆ ವಾಸವಾಗಿದ್ದರು. ಈ ದಂಪತಿ ವಾಸವಿದ್ದ ಕಡೆಗಳಲ್ಲಿ ಕಳ್ಳತನ ಮಾಡಿದ್ದರು ಎಂದು ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ.

ಈ ಇಬ್ಬರು ಮುಲ್ಕಿಯ ಸೋಮನಸುಂದರ್ ಅಂಚನ್ ಮತ್ತು ಹಸನಬ್ಬ ಅವರ ಮನೆ, ಚರಂತಿ ಪೇಟೆ ಮುಲ್ಕಿಯ ಪ್ರಕಾಶ್ ಜ್ಯುವೆಲ್ಲರಿ, ಮಾರಿಯಮ್ಮ ದೇವಸ್ಥಾನ, ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.