ದೀದಿಗೆ ಮತ್ತೊಂದು ಶಾಕ್: ಸಚಿವ ಲಕ್ಷ್ಮಿ ರತನ್ ಶುಕ್ಲಾ ರಾಜೀನಾಮೆ

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕ್ರೀಡಾ ಇಲಾಖೆ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮಾಜಿ ಕ್ರಿಕೆಟಿಗರೂ ಕೂಡ ಆಗಿರುವ ಲಕ್ಷ್ಮಿ ರತನ್ ಶುಕ್ಲಾ ಇಂದು ಹೌರಾದಲ್ಲಿರುವ ಟಿಎಂಸಿ ಕಚೇರಿಗೆ ತೆರಳಿ ಟಿಎಂಸಿ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮಿ ರತನ್ ಶುಕ್ಲಾ ಅವರು ಸುವೆಂದು ಅಧಿಕಾರಿಯ ನಂತರ ಮಮತಾ ಬ್ಯಾನರ್ಜಿ ಸಂಪುಟಕ್ಕೆ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದಾರೆ.

ಪಶ್ಚಿಮ ಬಂಗಾಳದ ಮಾಜಿ ಸಾರಿಗೆ ಮತ್ತು ನೀರಾವರಿ ಸಚಿವರಾಗಿದ್ದ ಸುವೆಂದು ಅಧಿಕಾರಿ ಅವರು 2020 ರ ಡಿಸೆಂಬರ್ 19 ರಂದು ಪಶ್ಚಿಮ ಮಿಡ್ನಾಪೋರ್‌ನಲ್ಲಿ ನಡೆದ ಭವ್ಯ ರ್ಯಾಲಿಯಲ್ಲಿ ಟಿಎಂಸಿಯನ್ನು ತೊರೆದು ಬಿಜೆಪಿಗೆ ಸೇರಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಇತ್ತ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆಯುತ್ತಿರುವ ಮುಖಂಡರ ಪಟ್ಟಿ ಬೆಳೆಯುತ್ತಿದ್ದು, ಈ ಪಟ್ಟಿಗೆ ಇದೀಗ ಪಶ್ಚಿಮ ಬಂಗಾಳದ ಯುವ ಸೇವೆಗಳು ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ ಸೇರ್ಪಡೆಯಾಗಿದ್ದಾರೆ.