ಇಸ್ರೇಲ್​ಗೆ ಏರ್​ ಇಂಡಿಯಾ ವಿಮಾನ ಅಕ್ಟೋಬರ್​ 14 ರ ವರೆಗೆ ಹಾರಾಟ ರದ್ದು

ನವದೆಹಲಿ: ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ನಡೆಯುತ್ತಿರುವ ‘ರಾಕೆಟ್​ ಕಾಳಗ’ದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಕ್ಕಟ್ಟು ಇನ್ನೂ ಮುಂದುವರೆದಿರುವ ಕಾರಣ ಭಾರತದ ವಿಮಾನಯಾನ ಸಂಸ್ಥೆಯಾದ ಏರ್​ ಇಂಡಿಯಾ ಇಸ್ರೇಲ್​ಗೆ ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಅಕ್ಟೋಬರ್​ 14ರ ವರೆಗೆ ನಿಲ್ಲಿಸಿದೆ. ಇಸ್ರೇಲ್​ನ ಪ್ರಮುಖ ನಗರ​ ಟೆಲ್ ಅವೀವ್‌ಗೆ ಹೊರಡುವ ಮತ್ತು ಅಲ್ಲಿಂದ ಬರುವ ತನ್ನೆಲ್ಲಾ ವಿಮಾನಗಳನ್ನು ಮುಂದಿನ 6 ದಿನಗಳ ಕಾಲ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ.ಹಮಾಸ್ ಉಗ್ರರು ಮತ್ತು ಇಸ್ರೇಲ್ ಪಡೆಗಳ ನಡುವೆ ‘ಯುದ್ಧ’ ನಡೆಯುತ್ತಿದ್ದು, ಜನರಿಗೆ ತೊಂದರೆ ಉಂಟಾಗದಿರಲು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ 6 ದಿನಗಳ ಕಾಲ ಇಸ್ರೇಲ್​ಗೆ ವಿಮಾನ ಹಾರಾಟವನ್ನು ನಿಲ್ಲಿಸಿದೆ.

ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಟೆಲ್ ಅವೀವ್‌ಗೆ ವಾರದಲ್ಲಿ ಐದು ವಿಮಾನಗಳನ್ನು ನಿರ್ವಹಿಸುತ್ತದೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ವಿಮಾನಗಳು ಅಲ್ಲಿಗೆ ತೆರಳುತ್ತವೆ. ದಾಳಿ ಶುರುವಾದ ಶನಿವಾರವೇ ಟೆಲ್ ಅವಿವ್‌ಗೆ ತೆರಳುವ ಮತ್ತು ಅಲ್ಲಿಂದ ಬರುವ ತನ್ನ ವಿಮಾನಗಳನ್ನು ಏರ್​ಲೈನ್ಸ್​ ರದ್ದುಗೊಳಿಸಿತ್ತು.
‘ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಯಾವುದೇ ವಿಮಾನದ ಬುಕ್ಕಿಂಗ್​ ಮಾಡಿಸಿದಲ್ಲಿ ಅಂತಹ ಪ್ರಯಾಣಿಕರಿಗೆ ಏರ್‌ಲೈನ್ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ’ ಎಂದು ಏರ್​ಲೈನ್ಸ್​ ವಕ್ತಾರರು ತಿಳಿಸಿದ್ದಾರೆ

ಇಸ್ರೇಲ್​ಗೆ ಭಾರತ ಬೆಂಬಲ: ವಿಶ್ವದಲ್ಲಿಯೇ ಅತಿ ಚಾಣಾಕ್ಷ ರಹಸ್ಯ ಪಡೆಗಳನ್ನು ಹೊಂದಿರುವ ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ದಾಳಿ ನಡೆಸಿದ್ದನ್ನು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ. ಈ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದಕ ದಾಳಿಗೆ ಒಳಗಾದ ಇಸ್ರೇಲ್‌ಗೆ ನಮ್ಮ ಬೆಂಬಲವಿದೆ. ಹಮಾಸ್​ ದಾಳಿಯು ಖಂಡನೀಯ ಎಂದಿದ್ದರು.

ನೆಲ, ವಾಯು, ಜಲದ ಮೂಲಕ ನಡೆಯುತ್ತಿರುವ ದಾಳಿಗಳಲ್ಲಿ ಈಗಾಗಲೇ ಎರಡೂ ದೇಶಗಳಲ್ಲಿ 500 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ರಕ್ಷಣಾ ಪಡೆಗಳು ದಾಳಿ ಮಾಡುತ್ತಿವೆ. 50 ವರ್ಷಗಳ ಹಿಂದೆ ಯೋಮ್ ಕಿಪ್ಪೂರ್ ಯುದ್ಧದ ನಂತರ, ಈಗ ನಡೆದ ಹಮಾಸ್​ ದಾಳಿಯು ‘ಮಾರಣಾಂತಿಕ’ ಎಂದು ಹೇಳಲಾಗಿದೆ.ಪ್ಯಾಲೆಸ್ತೇನ್​ನ ಹಮಾಸ್​ ಉಗ್ರಗಾಮಿಗಳು ಶನಿವಾರ ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್​ಗಳಿಂದ ಏಕಾಏಕಿ ದಾಳಿ ನಡೆಸಿತ್ತು. ದಿಢೀರ್​ ಆಗಿ ನಡೆದ ದಾಳಿಯಲ್ಲಿ ಇಸ್ರೇಲ್​ನ ನೂರಾರು ಜನರು ಸಾವಿಗೀಡಾಗಿ, ಸಾವಿರಾರ ಜನರು ಗಾಯಗೊಂಡಿದ್ದಾರೆ. ತನ್ನ ದೇಶದ ಮೇಲೆ ನಡೆದ ಆಕ್ರಮಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಗುಡುಗಿದ ಇಸ್ರೇಲ್​, ಪ್ಯಾಲೆಸ್ತೇನ್​ ಮೇಲೆ ಪ್ರತಿದಾಳಿ ನಡೆಸಿದೆ.