ಜೊಗೇಶ್ವರಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ

ಜೊಗೇಶ್ವರಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಆ. 31 ರಂದು ಜೋಗೇಶ್ವರಿ ಪಶ್ಚಿಮದ ರಿಲೀಫ್ ರೋಡ್ ಗುಲ್ಶನ್ ನಗರದ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಮಧ್ವಾಚಾರ್ಯ ಮೂಲ ಸಂಸ್ಥಾನದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥರ ಶುಭಾಶೀರ್ವಾ ಹಾಗೂ ಪೂರ್ವಾರಾಧನೆಯೊಂದಿಗೆ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮದ ಜೊತೆ ಭಕ್ತಿ ಭಾವದಿಂದ ಜರಗಿತ್ತು.

ಸೆ.1 ರಂದು ಮಧ್ಯಾರಾಧನೆಯ ಅಂಗವಾಗಿ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ ,ವೇದಪರಾಯಣ, ಪಂಚಾಮೃತ ಅಭಿಷೇಕ, ಸರ್ವ ಸೇವೆ, ನಂತರ ಗಜರಥದಲ್ಲಿ ರಾಯರ ಪ್ರತಿಬಿಂಬದೊಂದಿಗೆ ಬೃಂದಾವನದ ವೃತ್ತದಲ್ಲಿ ಚೆಂಡೆ ಭಜನೆಯೊಂದಿಗೆ ಮೆರವಣಿಗೆ, ಬಳಿಕ ರಾಯರ ರಥೋತ್ಸವ ಮೆರವಣಿಗೆ ಜರುಗಿತು. ಶ್ರೀ ಪ್ರಹ್ಲಾದರಾಯರ ಕನಕಮ್ಮ ಪೂಜೆ ಬ್ರಾಹ್ಮಣ ಅಲಂಕಾರ ಅಷ್ಟೋಧಕ ನೆರವೇರಿದ ನಂತರ ಮಧ್ಯಾಹ್ನದ ಮಹಾಮಂಗಳಾರತಿ ನಡೆಯಿತು.

ರಾಯರ ಧಾರ್ಮಿಕ ಆರಾಧನೆಯಲ್ಲಿ ಮಹಾಲಕ್ಷ್ಮಿ ಭಜನಾ ಮಂಡಳಿ ಸದಸ್ಯರ ವತಿಯಿಂದ ರಾಯರ ಭಜನ ಗಾಯನ ಕಾರ್ಯಕ್ರಮ ನಡೆಯಿತು.

ಭೌತಿಕವಾಗಿಯೂ ಆಧ್ಯಾತ್ಮಿಕವಾಗಿ ಗುರುರಾಯರೆಂದೇ ಕರೆಯಲ್ಪಡುವ ಮಹಾ ಗುರುವಿನ ಪ್ರಪಂಚಾದ್ಯಂತ ಸಹಸ್ರಾರು ಜನ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಆರಾಧನೆಯಲ್ಲಿ ರಾಯರ ಜೊಗೇಶ್ವರಿಯ ಅಭಿನಯ ಮಂತ್ರಾಲಯದ ಬೃಂದಾವನದಲ್ಲಿ ಪ್ರಬಂಧಕ ಸ್ವಾಮಿರಾಯ ಜೋಶಿ ನೆರೆದವರಿಗೆ ರಾಯರಿಂದ ಅನುಗ್ರಹಿಸಿ ಮಂತ್ರಾಕ್ಷತೆ ನೀಡಿದರು. ವಿಚಾರಕರ್ತ ದೀಪಕ್ ವೈದ್ಯ ರಾಘು ಆಚಾರ್ಯ ಇನ್ನಿತರ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಆಗಸ್ಟ್ 31ರಿಂದ ಪ್ರಾರಂಭಗೊಂಡು ಸೆ. 2ರಂದು ಉತ್ತರಾಧನೆಯೊಂದಿಗೆ ಕೊನೆಗೊಂಡ ಮೂರು ದಿನಗಳ ಆರಾಧನೆಯಲ್ಲಿ ದಿನಂಪ್ರತಿ ರಾಯರ ಬೃಂದಾವನಕ್ಕೆ ದೈನಂದಿನ ಪೂಜಾ ವಿಧಿ ವಿಧಾನಗಳ ಜೊತೆಗೆ ರಥೋತ್ಸವ ಮೆರವಣಿಗಳು ಜರುಗುತ್ತಿದ್ದು ಭಕ್ತರಿಗೆಲ್ಲಾ ಅನ್ನ ಸಂತರ್ಪಣೆ ನೆರವೇರುತ್ತಿತ್ತು.

ವಿಶ್ವ ಹಿತಬಯಸಿ, ವಿಶ್ವಧರ್ಮದ ಉದ್ದಾರಕರಾಗಿ ಚಲನಶೀಲ ಬದುಕಿಗೆ ವರ್ತಮಾನದಲ್ಲಿ ಜೀವನ ಮೌಲ್ಯಗಳೇ ಮುಖ್ಯವೆಂಬುದನ್ನು ಸಾರಿದವರು ಶ್ರೀ ರಾಘವೇಂದ್ರ ಸ್ವಾಮಿಗಳು. ಶ್ರೀ ಮೂಲ ರಾಮದೇವರು ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಅಪ್ರತಿಮ ಪ್ರತಿಮೆಯ ಆರಾಧಕರಾಗಿ ಮನುಕುಲದ ಉತ್ಕ್ರಾಂತಿಯ ಒಂದು ದಿವ್ಯ ಮನಸ್ಥಿತಿಯ ವ್ಯಾಖ್ಯಾನದ ಕಾರ್ಯನಿರ್ವಹಿಸಿದರು. ಆಚಾರ್ಯ ಮಧ್ವರ ತಾತ್ವಿಕ ಸಿದ್ದಾಂತವನ್ನು ರಾಯರು ಸಮಸ್ತ ಭಕ್ತರ ಮುಂದೆ ಅನಾವರಣಗೊಳಿಸಿದರು. ಹಲವಾರು ಪವಾಡಗಳ ಮೂಲಕ ಮೆರೆದು ಅವಧೂತರಾಗಿ ಲೋಕದ ಒಳಿತನ್ನು ಬಯಸಿದವರು. ಸರ್ವ ಜನಾಂಗದರು ಪೂಜಿತರಾಗಿರುವ ರಾಘವೇಂದ್ರ ಸ್ವಾಮಿಗಳು ಸರ್ವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಮಂತ್ರಾಲಯ ಅಧಿಪೀಠದ ಬೃಂದಾವನದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಎನ್ನುವ ಒಂದೇ ದೃಷ್ಟಿಯಲ್ಲಿ ಎಲ್ಲರನ್ನು ಆಧರಿಸಲಾಗುತ್ತಿದೆ.

ಚಿತ್ರ, ವರದಿ: ರಮೇಶ್ ಉದ್ಯಾವರ