ಚಂದ್ರಯಾನ–3ರ ಕೌಂಟ್‌ಡೌನ್‌ ಧ್ವನಿ ಇನ್ನಿಲ್ಲ

ಬೆಂಗಳೂರು: ಚಂದ್ರಯಾನ-3 ಉಪಗ್ರಹ ಉಡಾವಣೆಯ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಡಾವಣೆಗೂ ಮುನ್ನಿನ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನರಾಗಿದ್ದಾರೆ.

ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು ಶನಿವಾರ ಮೃತಪಟ್ಟಿದ್ದಾರೆ. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ‌ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು.

ಇಸ್ರೊ ಮಾಜಿ ನಿರ್ದೇಶಕ ಪಿ.ವಿ ವೆಂಕಟಕೃಷ್ಣನ್‌ ಅವರು X ಖಾತೆಯಲ್ಲಿ, ‘ಶ್ರೀಹರಿಕೋಟಾದಿಂದ ಇಸ್ರೊ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು’ ಎಂದು ಬರೆದುಕೊಂಡಿದ್ದಾರೆ.