ಮಂಗಳೂರು: ವಿಶ್ವ ಕೊಂಕಣಿ ಕೇಂದ್ರವು ಉಡುಪಿ ಸೀರೆಗಳ ಮೇಲೆ ಕಾವಿ ಕಲೆ ವಿನ್ಯಾಸಗಳನ್ನು ರೂಪಿಸಲು ಕದಿಕೆ ಟ್ರಸ್ಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾವಿ ಕಲೆ ಕಲಾ ಪ್ರಕಾರವನ್ನು ಭಾರತದ ಪಶ್ಚಿಮ ಕರಾವಳಿಯಾದ್ಯಂತ ಕೊಂಕಣಿ ದೇವಾಲಯಗಳಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರಚಾರ ಮಾಡಲಾಗಿದೆ. ಆದರೆ ದೇವಾಲಯದ ರಚನೆಗಳ ಆಧುನೀಕರಣದ ಕಾರಣದಿಂದಾಗಿ ಇದೀಗ ಈ ಕಲೆಯು ಅಪಾಯದಲ್ಲಿದೆ.
ಉಡುಪಿ ಸೀರೆಗಳು ಸಾಂಪ್ರದಾಯಿಕ ಕೈಮಗ್ಗದ ಸೀರೆಗಳಾಗಿದ್ದು ಅಳಿವಿನ ಅಂಚಿನಲ್ಲಿರುವ ಈ ಸನಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಕದಿಕೆ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ಇದೀಗ ಕಾವಿ ಕಲೆಯನ್ನು ಉಡುಪಿ ಸೀರೆಗಳಲ್ಲಿ ಸಮ್ಮಿಳಿತಗೊಳಿಸಿ ಕಲೆಯನ್ನು ಉಳಿಸುವ ಪ್ರಯತ್ನವನ್ನು ಮಾಡಲು ಟ್ರಸ್ಟ್ ಮುಂದಾಗಿದೆ.
ವಿಶ್ವ ಕೊಂಕಣಿ ಕೇಂದ್ರದ ಸಿಇಒ ಗುರುದತ್ ಬಂಟ್ವಾಳಕರ್ ಟೈಮ್ಸ್ ಆಫ್ ಇಂಡಿಯಾಗೆ ಈ ಬಗ್ಗೆ ಮಾಹಿತಿ ನೀಡಿ, ಡಾ. ಕೃಷ್ಣಾನಂದ ಕಾಮತ್ ರವರು ಕಾವಿ ಕಲೆಯ ಬಗ್ಗೆ ಪುಸ್ತಕ ಬರೆದಿರುವುದನ್ನು ನೆನಪಿಸಿಕೊಂಡಿದ್ದಾರೆ. ದೇವಸ್ಥಾನದ ಗೋಡೆಗಳ ಮೇಲೆ ರಚಿಸಲಾದ ಈ ಕಲೆಯನ್ನು ಉಳಿಸುವ ಪ್ರಯತ್ನದ ಬಗ್ಗೆ ಅವರ ಅಭಿಪ್ರಾಯವನ್ನು ಗುರುದತ್ ಉಲ್ಲೇಖಿಸಿದ್ದಾರೆ.
ಕೆಂಪು ಆಕ್ಸೈಡ್ ನೊಂದಿಗೆ ಸುಣ್ಣದ ಮಿಶ್ರಣದ ಇದೊಂದು ಸುಂದರ ಕಲೆ. ಗೋವಾದ ದೇವಸ್ಥಾನಗಳಲ್ಲಿಯೂ ಈ ಕಲೆ ಕಂಡು ಬಂದಿವೆ. ಈ ಕಲೆಯನ್ನು ಕಲಾಕೃತಿಗಳ ಮೂಲಕ ಉಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಇದನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಉಡುಪಿ ಸೀರೆಗಳ ಜೊತೆ ಕೈಜೋಡಿಸಲಾಗಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾಮಗಾರಿಗಳು ಪ್ರಾಥಮಿಕ ಹಂತದಲ್ಲಿವೆ. ವಾಸ್ತವವಾಗಿ ಉತ್ಪನ್ನವನ್ನು ಪ್ರಾರಂಭಿಸುವ ಮೊದಲು ಹಲವಾರು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ನೈಸರ್ಗಿಕ ರಂಗು ಮತ್ತು ಮಂಜಿಷ್ಠ ಮುಂತಾದವುಗಳನ್ನು ಉಪಯೋಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನೇಕಾರರ ಜೊತೆ ಚರ್ಚಿಸಲಾಗಿದ್ದು ಅವರು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಎಂದು ಕದಿಕೆ ಟ್ರಸ್ಟ್ ನ ಅಧ್ಯಕ್ಷೆ ಮಮತಾ ರೈ ಹೇಳಿದ್ದಾರೆ ಎಂದು ಟಿಒಐ ವರದಿ ಮಾಡಿದೆ.












