ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದಿವ್ಯಾಂಗರಿಗೆ ಸಹಾಯ; ದಕ್ಷರಿಗೆ ಸನ್ಮಾನ

ಉಡುಪಿ: ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ದಿವ್ಯಾಂಗರಿಗೆ ಸಹಾಯ ಹಾಗೂ ದಕ್ಷ ಪೋಲೀಸ್ ಅಧಿಕಾರಿಯವರಿಗೆ ಸನ್ಮಾನ ಕಾರ್ಯಕ್ರಮವು ಡಿ.4 ಭಾನುವಾರದಂದು “ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ”, “ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು” ಮತ್ತು “ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ” ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಮಂದಿರ ಬನ್ನಂಜೆ ಇಲ್ಲಿ ವಿಶಿಷ್ಟವಾಗಿ ಜರುಗಿತು.

ಈ ಸಂದರ್ಭದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ದುಡಿಯಲು ಸಾಧ್ಯವಿಲ್ಲದಂತಹ ಬಡವರು, ಹಾಗೂ ದುರ್ಬಲರು ಹಾಗೂ ಅಶಕ್ತರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ ಹಾಗೂ ಔಷಧಗಳನ್ನು ವಿತರಿಸಲಾಯಿತು. ಇದರೊಂದಿಗೆ ಸ್ವಂತ ಉದ್ಯೋಗದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ದೃಷ್ಟಿಯಿಂದ ಅರ್ಹ ವ್ಯಕ್ತಿಗಳಿಗೆ ಬತ್ತಿಕಟ್ಟುವ ಯಂತ್ರ, ಹೊಲಿಗೆ ಯಂತ್ರ, ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ದಾನಿಗಳ ಸಹಾಯದಿಂದ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಇವರು ವಹಿಸಿ ಮಾತನಾಡಿ, ಜನೋಪಯೋಗೀ ಕೆಲಸಗಳನ್ನು ಮಾಡುವುದು ಜನ ಪ್ರತಿನಿಧಿಯಾಗಿ ನನ್ನ ಕರ್ತವ್ಯ. ಕೇವಲ ಜನಪ್ರತಿನಿಧಿಗಳಿಂದ ಸಮಾಜದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ಅಸಾಧ್ಯ. ಸಮಾಜದಲ್ಲಿನ ಅನೇಕ ಗಣ್ಯರು ಹಾಗೂ ದಾನಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು. ಇಂತಹ ಸಮಾಜಸ್ನೇಹೀ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಈಸಂದರ್ಭದಲ್ಲಿ ಉಡುಪಿ ನಗರಠಾಣೆ ಇಲ್ಲಿಯ ದಕ್ಷ ಹಾಗೂ ಪ್ರಾಮಾಣಿಕ ಪೋಲೀಸ್ ಅಧಿಕಾರಿ ಪ್ರಮೋದ್ ಕುಮಾರ್. ಪಿ. ಅವರನ್ನು ಸನ್ಮಾನಿಸಲಾಯಿತು. ಪ್ರಮೋದ್ ಅವರ ದಕ್ಷತೆಯ ಸೇವೆಯನ್ನು ಸ್ಮರಿಸಿ ಶ್ಲಾಘಿಸಿದ ದ ವಿಜಯ್ ಕೊಡವೂರು, ಪ್ರಮೋದ್ ಅವರಿಂದಾಗಿ ಉಡುಪಿ ಜಿಲ್ಲೆಯಲ್ಲಿ ಅನೇಕ ಅಕ್ರಮ ಚಟುವಟಿಕೆಗಳು, ಅಪರಾಧಗಳು ನಿಯಂತ್ರಣಕ್ಕೆ ಬಂದಿರುವುದನ್ನು ಹೇಳಿದರು. ಈ ಬದಲಾವಣೆಯನ್ನು ಜನರು ಗುರುತಿಸಿರುವುದಾಗಿಯೂ ಮುಂದೆಯೂ ಉತ್ತಮ ಸೇವೆ ಅವರಿಂದ ಉಡುಪಿ ಜನತೆಗೆ ಸಿಗಲೆಂಬುದಾಗಿ ಹಾರೈಸಿದರು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವ ಮುಖಾಂತರ ಸಮಾಜ ಪ್ರಾಮಾಣಿಕರನ್ನು ಪ್ರೋತ್ಸಾಹಿಸಬೇಕೆಂಬುದಾಗಿ ಕರೆನೀಡಿದರು.

ಇದೇ ಸಂದರ್ಭದಲ್ಲಿ ಮೋದಿ ಸರಕಾರದ ಸವಲತ್ತುಗಳ ಮಾಹಿತಿ ಕಾರ್ಯಗಾರವೂ ನಡೆಯಿತು.

ಕಾರ್ಯಕ್ರಮದಲ್ಲಿ ಮಠದಬೆಟ್ಟು ಯುವಕ ಸಂಘದ ಅಧ್ಯಕ್ಷ ಉದಯ ಪೂಜಾರಿಯವರು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಧ್ಯಾ ರಮೇಶ್ , ಪ್ರಮೋದ್ ಉಚ್ಛಿಲ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಕೊಡವೂರು ಸಿಎ ಬ್ಯಾಂಕ್ ಅಧ್ಯಕ್ಷ ನಾರಾಯಣ್ ಬಲ್ಲಾಳ್, ರತ್ನಾಕರ್ ದೇವಾಡಿಗ, ವಿನಾಯಕ್ ರಾವ್ ಅಧ್ಯಕ್ಷರು ಸೇವಾ ಧಾಮ ಕನ್ಯಾಡಿ, ಮತ್ತಿತರರು ಉಪಸ್ಥಿತರಿದ್ದರು.

ಯಶೋದಾ ಕೇಶವ ಸ್ವಾಗತಿಸಿದರು. ಸ್ವಾತಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ ವತಿಯಿಂದ ಒಟ್ಟು 16 ಜನರಿಗೆ ಅಕ್ಕಿವಿತರಣೆ ನಡೆಯಿತು.

ಲಿಗೆ ಯಂತ್ರವನ್ನು ನಾಗಲಕ್ಷ್ಮಿ, ಬತ್ತಿ ಕಟ್ಟುವ ಯಂತ್ರ ಶೋಭಾ, ದಿನಸಿ ಕಿಟ್ ಕೃಷ್ಣ, ವೀಲ್ ಚೇರ್, ಆಶ್ರಯ ಧಾಮಕ್ಕೆ ದಾನಿಗಳ ನೆರವಿನಿಂದ ಧನ ಸಹಾಯ ಮಾಡಲಾಯಿತು.

ಹಾಗೆಯೇ ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು, ಮಹಿಳಾ ಸಮಿತಿ ಕೊಡವೂರು, ಬೆಲ್ – ಓ – ಸೀಲ್ ಮಜ್ದೂರ್ ಸಂಘ ಸಂತೆಕಟ್ಟೆ, ಪ್ರಮೋದ್ ಕುಮಾರ್ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಹಕಾರ ನೀಡಿದವರೆಲ್ಲರಿಗೂ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು.