ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ ನ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು, ಇದರಿಂದ ಅವರು ಸಾಕಷ್ಟು ಬಳಲಿದ್ದರು.ಆದ್ದರಿಂದ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ರಜನಿಕಾಂತ್ ಬಹುನಿರೀಕ್ಷಿತ ‘ಅಣ್ಣಾತೆ’ ಸಿನಿಮಾದ ಶೂಟಿಂಗ್ಗಾಗಿ ಹತ್ತು ದಿನಗಳಿಂದ ಹೈದರಾಬಾದ್ನಲ್ಲಿದ್ದರು. ಚಿತ್ರೀಕರಣ ತಂಡದಲ್ಲಿರುವ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.
ಡಿ.22ರಂದು ರಜನಿಕಾಂತ್ ಅವರಿಗೆ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಕೊರೊನಾ ಪರೀಕ್ಷೆಯ ವರದಿಯಲ್ಲಿಯೂ ನೆಗೆಟಿವ್ ಬಂದಿತ್ತು. ನಂತರ ಅವರು ಐಸೊಲೇಷನ್ನಲ್ಲಿದ್ದರು.
ರಜನಿಕಾಂತ್ ಆರೋಗ್ಯ ಪರಿಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ರಜನಿಕಾಂತ್ ಅವರ ರಕ್ತದೊತ್ತಡ ಏರುಪೇರಾಗಲು ಕಾರಣ ಏನಿರಬಹುದು ಎಂಬ ಬಗ್ಗೆಯೂ ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ರಕ್ತದೊತ್ತಡ ಸರಿಯಾಗಿ, ಬಳಲಿಕೆಯಿಂದ ಚೇತರಿಸಿಕೊಳ್ಳುವವರೆಗೂ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.












