ನೀಲಾವರ ಗೋಶಾಲೆಯಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ

ಉಡುಪಿ: ನೀಲಾವರ ಗೋಶಾಲೆಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಕೃಷ್ಣನ ಉತ್ಸವ ಮೂರ್ತಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನಡೆದ ಕೃಷ್ಣಲೀಲೋತ್ಸವವನ್ನು ಶ್ರೀಗಳ ವಿದ್ಯಾರ್ಥಿಗಳು ಮತ್ತು ಸಿಬಂದಿ ವರ್ಗ  ಅತ್ಯಂತ ವಿಶಿಷ್ಟವಾಗಿ ಸಂಯೋಜಿಸಿದರು.
ಹತ್ತಾರು ವಿದ್ಯಾರ್ಥಿಗಳು ತಾವೇ ಸ್ವಯಂ ಗೋಪಾಲಕರಾಗಿ ಗೋಶಾಲೆಯ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಹವಹಿಸಿ,  ಅಲ್ಲಲ್ಲಿ ತೂಗು ಹಾಕಿದ್ದ  ಬಣ್ಣದ ಓಕುಳಿ , ಮೊಸರು , ಚಕ್ಕುಲಿ ಉಂಡೆ  ಬೆಣ್ಣೆ ಇತ್ಯಾದಿಗಳನ್ನು ತುಂಬಿದ್ದ ಅಲಂಕೃತ ಮಡಕೆಗಳನ್ನು ಒಡೆದು ಸಂಭ್ರಮಿಸಿದರು.
ಮಣ್ಣಿನಿಂದ ತಯಾರಿಸಿದ ಕೃಷ್ಣನ ವಿಗ್ರಹಕ್ಕೆ ಶ್ರೀಗಳು ಮಂಗಳಾರತಿ ಬೆಳಗಿದ ಬಳಿಕ ಬೆಳ್ಳಿ ಪಲ್ಲಕಿಯಲ್ಲಿಟ್ಟು, ಆ ಪಲ್ಲಕ್ಕಿಯನ್ನು ಟ್ರ್ಯಾಕ್ಟರ್ ನಲ್ಲಿಟ್ಟು ವಿವಿಧ ವೇಷ, ಚೆಂಡೆವಾದನದೊಂದಿಗೆ ಗೋಶಾಲೆಯ ಆವರಣದಲ್ಲಿ ಮೆರವಣಿಗೆ ನಡೆಯಿತು. ಉತ್ಸವದ ಬಳಿಕ ದೇವರಿಗೆ ವೇಣುವಾದನ ಸೇವೆ ನಡೆಯಿತು.
ಆ ನಂತರ ಮೃಣ್ಮಯ ವಿಗ್ರಹವನ್ನು ಶ್ರೀಗಳು ಪುಷ್ಕರಿಣಿಯಲ್ಲಿ ವಿಸರ್ಜಿಸುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು.