ಮಂಗಳೂರಿನ ಹೊಟೇಲಿನಲ್ಲಿ ಜಿರಳೆ ಪತ್ತೆ: ಪರಿಶೀಲನೆ ವೇಳೆ ಅಶುಚಿ ಕಂಡು ಅಧಿಕಾರಿಗಳು ಗರಂ ಮಾಲೀಕರಿಗೆ ನೋಟಿಸ್

ಸಾಂಕೇತಿಕ ಚಿತ್ರ

ಚಿತ್ರ: ಸಾಂಕೇತಿಕ

ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ವೃಂದಾವನ್ ಹೋಟೆಲ್ ಮೇಲೆ ದಿಢೀರ್ ದಾಳಿ ನಡೆಸಲಾಯಿತು.

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಅಧಿಕಾರಿಗಳು ಹೋಟೆಲ್‌ನ ಶೆಟರ್‌ಗಳನ್ನು ತೆರೆದು ಅಡುಗೆಮನೆ ಸೇರಿದಂತೆ ವಿವಿಧೆಡೆ ಕೂಲಂಕಷ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಆಹಾರ ಪದಾರ್ಥಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ಇಲ್ಲದಿರುವುದು ಹಾಗೂ ಅಡುಗೆಮನೆಯಾದ್ಯಂತ ಪದಾರ್ಥಗಳನ್ನು ಅಡ್ಡಾದಿಡ್ಡಿಯಾಗಿ ರಾಶಿ ಹಾಕಿರುವುದು ಪತ್ತೆಯಾಯಿತು.

ಸರಿಯಾಗಿ ಸಂಗ್ರಹಿಸದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ತೆರವುಗೊಳಿಸಿ, ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಸೂಚಿಸಿದರು. ಆಹಾರ ಪದಾರ್ಥಗಳನ್ನು ಪ್ರತ್ಯೇಕ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿ, ಸೂಕ್ತ ರೀತಿಯಲ್ಲಿ ಸಂಗ್ರಹಿಸುವಂತೆ ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.

ಹೋಟೆಲ್‌ನಲ್ಲಿ ಅಗತ್ಯ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಪ್ರಕರಣವನ್ನು ಹೆಚ್ಚುವರಿ ಉಪ ಆಯುಕ್ತರ (ಎಡಿಸಿ) ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.