ನವದೆಹಲಿ: 10 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರರೊಬ್ಬರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ.
ಬಂಧಿತ ಆರೋಪಿಯನ್ನು ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ (ICAS) 2020ರ ಬ್ಯಾಚ್ನ ಅಧಿಕಾರಿ ಸಂದೀಪ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯ ನವೀಕರಣ ಕಡತವನ್ನು ಪ್ರಕ್ರಿಯೆಗೊಳಿಸಿ ಅನುಮೋದನೆ ನೀಡಲು ಉದ್ಯಮಿಯೊಬ್ಬರಿಂದ 15 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಪೈಕಿ 10 ಲಕ್ಷ ರೂ. ಲಂಚದ ಹಣವನ್ನು ತಮ್ಮ ಪತ್ನಿಯ ಮೂಲಕ ಸ್ವೀಕರಿಸಿದ ಆರೋಪ ಸಂದೀಪ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಕಡತವನ್ನು ತೆರವುಗೊಳಿಸುವುದಕ್ಕೆ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.















